ಸೋನಿಯಾ ಗಾಂಧಿಯನ್ನು ಅವಮಾನಿಸಿರುವ ಯತ್ನಾಳ್, ಈ ದೇಶದ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಕ್ಷಮೆ ಕೋರಬೇಕು! | JANATA NEWS
ಬೆಂಗಳೂರು : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಬಿಜೆಪಿ ಶಾಸಕ ಯತ್ನಾಳ್ ವಿಷಕನ್ಯೆ ಎಂದು ಕರೆಯುವ ಮೂಲಕ ಬಿಜೆಪಿ ಇಡೀ ದೇಶದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಕ್ಷಮೆ ಕೇಳಬೇಕು. ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಇಂದು ಕೊಪ್ಪಳದಲ್ಲಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಸೋನಿಯಾ ಗಾಂಧಿಯನ್ನು ವಿಷಕನ್ಯೆ ಎಂದು ಕರೆದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಆ ದುಷ್ಟನ ಕ್ಷಮಾಪಣೆ ನನಗೆ ಬೇಕಿಲ್ಲ, ಅವರ ಪಕ್ಷದ ಹಿರಿಯ ನಾಯಕರು ಕ್ಷಮಾಪಣೆ ಕೇಳಬೇಕು. ಪ್ರಧಾನ ಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ ಮತ್ತು ರಾಷ್ಟ್ರಕ್ಕಾಗಿ ಜೀವವನ್ನೇ ಬಲಿದಾನ ಮಾಡಿದ ನಾಯಕನ ಪತ್ನಿಯ ಬಗ್ಗೆ ಇಷ್ಟು ಅವಹೇಳನಕಾರಿಯಾಗಿ ಮಾತಾಡಿದ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಶಿವಕುಮಾರ್ ಹೇಳಿದರು.
ಸೋನಿಯಾ ಗಾಂಧಿ ಅವರು ಈನೆಲದಲ್ಲಿ ಹುಟ್ಟದಿದ್ದರೂ ಇಂದಿರಾ ಗಾಂಧಿ ಅವರ ಸೊಸೆಯಾಗಿ ರಾಜೀವ್ ಗಾಂಧಿ ಅವರ ಧರ್ಮಪತ್ನಿಯಾಗಿ ಈ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನ ಮಾಡಿಕೊಂಡು ಬಂದಿದ್ದಾರೆ. ಎರಡು ಬಾರಿ ಅಂದರೆ 10 ವರ್ಷಗಳ ಕಾಲ ಅವರು ಪ್ರಧಾನಿ ಹುದ್ದೆ ತ್ಯಾಗ ಮಾಡಿದರು. ನಮ್ಮೆಲ್ಲರ ಒತ್ತಡದ ಮೇರೆಗೆ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ಪಕ್ಷದ ಅಧ್ಯಕ್ಷರಾದರು.
ಆಮೂಲಕ ನಮಗೆ ಶಕ್ತಿ ತುಂಬಿದ್ದಾರೆ. ನನ್ನಂತಹ ಕಾರ್ಯಕರ್ತನನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಕಳುಹಿಸಿದಾಗ ಅಲ್ಲಿಗೆ ಭೇಟಿ ನೀಡಿ ಎಲ್ಲಾ ಕಾರ್ಯಕರ್ತರಿಗೆ ಶಕ್ತಿ ತುಂಬಿದ ಆ ತಾಯಿಯನ್ನು ಕೇಂದ್ರದ ಮಾಜಿ ಸಚಿವ ಹಾಲಿ ಶಾಸಕ ವಿಷ ಕನ್ಯೆ ಎಂದು ಕರೆದಿದ್ದಾರೆ.
ಮಿಸ್ಟರ್ ಯತ್ನಾಳ್ ನಿನ್ನ ನಾಲಿಗೆ ಯಾರು ಏನು ಮಾಡುತ್ತಾರೋ ಗೊತ್ತಿಲ್ಲ. ಈ ರಾಜ್ಯದ ಸಂಸ್ಕೃತಿ ಇರುವ ಜನ ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ ನನ್ನ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಕರೆದಿರುವುದನ್ನು ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳುವುದಿಲ್ಲ ಎಂದರು.
ನಾವು ಯತ್ನಾಳ್ ಕ್ಷಮಾಪಣೆ ಕೇಳುತ್ತಿಲ್ಲ. ಈ ದೇಶದ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಕ್ಷಮೆ ಕೋರಬೇಕು. ಇದು ಕೇವಲ ಸೋನಿಯಾ ಗಾಂಧಿ ಅವರಿಗೆ ಮಾಡಿರುವ ಅಪಮಾನ ಮಾತ್ರವಲ್ಲ. ದೇಶಕ್ಕಾಗಿ ತನ್ನ ಸರ್ವಸ್ವ ತ್ಯಾಗ ಮಾಡಿರುವ ಮಹಿಳೆಯರಿಗೆ ಆಗಿರುವ ಅಪಮಾನ. ಬಿಜೆಪಿ ಅಧ್ಯಕ್ಷರಾದ ನಡ್ಡಾ ಅವರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಿ ಎಂದು ಆಗ್ರಹಿಸಿದರು.