ಕರ್ನಾಟಕ ಚುನಾವಣಾ ಪ್ರಚಾರ, ನಂಜನಗೂಡಿನ ದೇವಸ್ಥಾನದಲ್ಲಿ ಮುಗಿಸಿದ ಮೋದಿ! | JANATA NEWS
ಮೈಸೂರು : ಕರ್ನಾಟಕ ವಿಧಾನಸಭೆ ಚುನಾವಣಗೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗಲಿದೆ. ನಾಳೆ (ಮೇ.08) ರಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಹಿನ್ನೆಲೆ ಮೂರು ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸಿವೆ.
ಭಾನುವಾರ ಕೊನೆಯದಿನದ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ನಂಜನಗೂಡಿನ ದೇವಸ್ಥಾನದಲ್ಲಿ ಶ್ರೀಕಂಠೇಶ್ವರನ ದರ್ಶನ ಪಡೆದು ಚುನಾವಣಾ ಪ್ರಚಾರ ಮುಗಿಸಿದರು.
ನಂಜನಗೂಡಿನ ಎಲಚಗೆರೆಬೋರೆಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ನಂಜನಗೂಡಿನ ಜನತೆಗೆ ನನ್ನ ನಮಸ್ಕಾರಗಳು ಎಂದರು. ತಾಯಿ ಚಾಮುಂಡೇಶ್ವರಿ, ನಂಜುಂಡೇಶ್ವರ, ಮಲೆಮಹದೇಶ್ವರಗೆ ನಮಸ್ಕಾರಗಳು, ಮಲೆ ಮಹದೇಶ್ವರ ಸ್ವಾಮಿ ಹಾಗೂ ಆದಿ ಚುಂಚನಗಿರಿ ಮಠಗಳಿಗೆ ನಮಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಡಬಲ್ ಎಂಜಿನ್ ಸರಕಾರದಿಂದ ಅಭಿವೃದ್ಧಿ ಆಗಿದೆ. ಡಬಲ್ ಎಂಜಿನ್ ಸರಕಾರದಿಂದ ಮಾತ್ರ ಅಬಿವೃದ್ಧಿ ಸಾಧ್ಯ. ದೇಶದ ಆರ್ಥಿಕತೆಯಲ್ಲಿ ಬಹಳ ದೊ್ಡ್ಡ ಅಧ್ಯಾಯ ಬರೆದಿದೆ. ಆದರೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರವಿದ್ದಾಗ ಇದರ ಲಾಭ ಕರ್ನಾಟಕಕ್ಕೆ ಸಿಕ್ಕಿರಲಿಲ್ಲ ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬೃಹತ್ ಸಮಾವೇಶ ಮುಗಿಸಿ ನೇರವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರಿಗೆ ಮಂಗಳವಾದ್ಯಗಳೊಂದಿಗೆ ಭವ್ಯ ಸ್ವಾಗತ ಕೋರಲಾಯಿತು. ದೇವಸ್ಥಾನದ ಮುಖ್ಯ ಅರ್ಚಕರ ವೃಂದ ಪೂರ್ಣಕುಂಬ ಸ್ವಾಗತ ನೀಡಿ ಬರಮಾಡಿಕೊಂಡಿತು. ನಂತರ ನಂಜುಂಡೇಶ್ವರನ ದರ್ಶನ ಪಡೆದ ಮೋದಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಲೋಕಕಲ್ಯಾಣಕ್ಕಾಗಿ ಶ್ರೀಕಂಠೇಶ್ವರನ ಮುಂದೆ ಸಂಕಲ್ಪ ಮಾಡಿ, ಗರ್ಭಗುಡಿಯಲ್ಲಿ ಕೆಲನಿಮಿಷ ಕುಳಿತು ಪ್ರಾರ್ಥಿಸಿ, ಗರ್ಭಗುಡಿ ಪ್ರದಕ್ಷಿಣೆ ಹಾಕಿ, ಶ್ರೀಕಂಠೇಶ್ವರನ ಸನ್ನಿಧಿಯಿಂದ ಹೊರಬಂದರು.
ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ, ನಾಡಿನಲ್ಲಿ ಶಾಂತಿ ನೆಮ್ಮದಿ ಹಾಗೂ ಸಮೃಧ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದ ಶಿವಭಕ್ತ, ಪ್ರಧಾನಮಂತ್ರಿ ಶ್ರೀ @narendramodi ಜೀ. pic.twitter.com/6ynQxrU1Q2
— Basavaraj S Bommai (@BSBommai) May 7, 2023