ಮಹಿಳೆಯರಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ, ಪ್ರಚಾರದ ಕೊನೇ ದಿನ ಡಿಕೆಶಿ ಘೋಷಣೆ | JANATA NEWS
ಬೆಂಗಳೂರು : ಬಹಿರಂಗ ಪ್ರಚಾರಕ್ಕೆ ತೆರೆ ಬೀದ್ದಿದ್ದು, ಹೆಣ್ಣುಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಯನ್ನ ಹೊಸದಾಗಿ ನಿರ್ಮಿಸಿ, ಉಚಿತವಾಗಿ ಹೆರಿಗೆ ಸೌಲಭ್ಯ ಸಿಗುವಂತೆ ಮಾಡುತ್ತೇವೆ ಎಂದು ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ ಘೋಷಿಸಿದ್ದಾರೆ.
ಕಾಂಗ್ರೆಸ್ ಚುನಾವಣೆಗೂ ಮುನ್ನ ಹಲವು ಗ್ಯಾರಂಟಿ ಘೋಷಣೆಗಳನ್ನು ತಿಳಿಸಿದೆ. ಇವುಗಳನ್ನು ಕಾಂಗ್ರೆಸ್ನ ಪ್ರಣಾಳಿಕೆಯಲ್ಲೂ ಸೇರಿಸಲಾಗಿದೆ. ಈಗಾಗಲೇ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂ., ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿಯೊಬ್ಬರಿಗೆ 10 ಕೆಜಿ ಉಚಿತ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ 3000 ರೂಪಾಯಿ, ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ವೇತನ, ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ವೇತನದಂತಹ ಗ್ಯಾರಂಟಿಗಳನ್ನು ಘೋಷಿಸಿದೆ.
ಕೊನೆಯ ದಿನದ ಚುನಾವಣಾ ಪ್ರಚಾರದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತೊಂದು ಗ್ಯಾರಂಟಿ ಭರವಸೆಯನ್ನು ಘೋಷಿಸಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕೆರೆಗಳನ್ನ ತುಂಬಿಸುತ್ತೇವೆ. ಹೆಣ್ಣುಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಯನ್ನ ಹೊಸದಾಗಿ ನಿರ್ಮಿಸಿ, ಉಚಿತವಾಗಿ ಹೆರಿಗೆ ಸೌಲಭ್ಯ ಸಿಗುವಂತೆ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಂತಹ ನಗರಗಳಿಗೆ ಬರೋದು ತಪ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರದ ಯೋಜನೆಗಳಿಗೆ ಬ್ರೇಕ್ ಬೀಳಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಮಿಸ್ಟರ್ ನಡ್ಡಾಜಿ, ಏನ್ ಹೆದರಿಸ್ತೀರಾ? ಕೇಂದ್ರದ ಯೋಜನೆಗಳನ್ನು ನಿಲ್ಲಿಸುತ್ತೇವೆ ಅಂತ ಹೆದರಿಸ್ತೀರಾ? ಇಂತಹ ಬ್ಲ್ಯಾಕ್ಮೇಲ್ಗೆ ಹೆದರಲ್ಲ, ಎಂದರು.