ಖರ್ಗೆ ಅವರಿಗೆ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತುಕೊಟ್ಟಿದ್ದೆ, ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ | JANATA NEWS
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಿಎಂ ರೇಸ್ ಪೈಪೋಟಿ ತೀವ್ರಗೊಂಡಿದೆ. ಅದರಲ್ಲೂ ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಫಲಿತಾಂಶದ ಬಗ್ಗೆ ಕೆಲವರು ವೈಯಕ್ತಿಕ ಅಭಿಪ್ರಾಯ ತಿಳಿಸಿರಬಹುದು. ಯಾರ ನಂಬರ್ ಬಗ್ಗೆ ಮಾತಾಡುವ ಶಕ್ತಿ ನನಗಿಲ್ಲ. ನನ್ನ ನಂಬರ್ 135, ಭ್ರಷ್ಟ ಸರ್ಕಾರದ ವಿರುದ್ಧ ಬೇಸತ್ತು ಜನ ನಮಗೆ 135 ಸ್ಥಾನ ಕೊಟ್ಟಿದ್ದಾರೆ. ನಾವು ಮಾಡಿದ ಚುನಾವಣೆ ರಣತಂತ್ರ ಎಲ್ಲವೂ ದೇಶಕ್ಕೆ ಮಾದರಿ. ನನ್ನ ಬತ್ತಳಿಕೆಯಲ್ಲಿ ಸಾಕಷ್ಟು ವಿಚಾರಗಳಿದ್ದವು, ಆದರೆ ನನಗೆ ಸಮಯ ಸಿಗಲಿಲ್ಲ, ಸಿಕ್ಕಿದ್ದರೆ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಬಹುದಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಗೆ ತೆರಳುವುದನ್ನು ಕೂಡ ಖಚಿತಪಡಿಸಿರು ಅವರು, ದೆಹಲಿಗೆ ಹೋಗುತ್ತೇನೆ, ಆದರೆ ಯಾವ ಸಮಯದಲ್ಲಿ ಹೋಗುತ್ತೇನೋ ಗೊತ್ತಿಲ್ಲ. ಯಾವ ವಿಮಾನ ಸಿಗುತ್ತದೋ ನೋಡಿಕೊಂಡು ಹೋಗುತ್ತೇನೆ ಎಂದರು.
ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತುಕೊಟ್ಟಿದ್ದೆ. ಯಾರ ಕ್ಲೇಮ್ ಬಗ್ಗೆಯೂ ನಾನು ಮಾತನಾಡುವುದಿಲ್ಲ. ನಾನು ಸಿಂಗಲ್ ಮ್ಯಾನ್. ನಾನು ಧೈರ್ಯದಲ್ಲಿ, ವಿಶ್ವಾಸದಲ್ಲಿ ನಂಬಿಕೆಯಿಟ್ಟವನು. ಹಿಂದಿನ ಐದು ವರ್ಷಗಳಲ್ಲಿ ಏನಾಗಿದೆ ಎಂದು ಈಗ ಹೇಳಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೇಳುತ್ತೇನೆ ಎಂದರು.
ಸೋತಾಗ ಧೈರ್ಯದಿಂದ ಇರಬೇಕು, ಗೆದ್ದಾಗ ಉದಾರ ಮನಸ್ಸಿನಿಂದ ಇರಬೇಕು ಎಂದು ಗಾಂಧೀಜಿ ಹೇಳಿದ್ದರು. ನಮ್ಮ 15 ಜನ ಶಾಸಕರು ಪಕ್ಷ ಬಿಟ್ಟು ಹೋದ ಸಂದರ್ಭದಲ್ಲೂ ಈ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಿದ್ದೆ. ಖರ್ಗೆ ಅವರಿಗೆ ರಾಜ್ಯ ರಾಜಕಾರಣದ ಬಗ್ಗೆ ಅರಿವಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲೆ ವಿಶ್ವಾಸ ಇದೆ. ಸಿಎಂ ಯಾರಾಗಬೇಕು ಎಂಬುದನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ತೀರ್ಮಾನಿಸುತ್ತಾರೆ, ಅದನ್ನು ಅವರಿಗೇ ಬಿಡೋಣ ಎಂದರು.