ಮಧು ಬಂಗಾರಪ್ಪಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ನಾಮಧಾರಿ ಈಡಿಗ ಸಂಘಗಳ ಬೇಡಿಕೆ | JANATA NEWS
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಹಾಗೂ ಸೊರಬ ಕ್ಷೇತ್ರದಿಂದ ಮತ್ತೊಮ್ಮೆ ಚುನಾಯಿತರಾಗಿರುವ ಶಾಸಕ ಮಧು ಬಂಗಾರಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಗ್ಲೋಬಲ್ ನಾಮಧಾರಿ(ಈಡಿಗ) ಸೇರಿದಂತೆ ಸಮುದಾಯದ ಪ್ರಮುಖ ಸಂಘಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ.
ಎಸ್.ಬಂಗಾರಪ್ಪಜಿ ಅವರು ಬಿಜೆಪಿ ಸೇರಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಹಾಗೂ ಕಾಂಗ್ರೆಸ್ ರಾಜ್ಯದಲ್ಲಿ ದುರ್ಬಲಗೊಂಡಿತ್ತು. ಆದರೆ ಈಗ ಅದು ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷ ಈ ಬಾರಿ ರಾಜ್ಯದಲ್ಲಿ ಅದ್ಭುತ ಬಹುಮತ ಪಡೆಯಲು ಸಾಧ್ಯವಾಗಿದೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ನವರು ಇದೆಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾಮಧಾರಿ ಈಡಿಗ ಹಾಗೂ ಬಿಲ್ಲವ ಸಮುದಾಯದ ಪರವಾಗಿ ನೇತಾರರಾದ ಶ್ರೀ ಮಧು ಬಂಗಾರಪ್ಪ ಅವರಿಗೆ ಪ್ರಮುಖ ಪೋರ್ಟ್ಪೋಲಿಯೋಗಳೊಂದಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ, ಎಂದು ಗ್ಲೋಬಲ್ ನಾಮಧಾರಿ ಸಂಘದ ಉಪಾಧ್ಯಕ್ಷರಾದ ಹರೀಶ್ ನಾಯ್ಕ ಅವರು ಹೇಳಿದ್ದಾರೆ.
ಬಿಜೆಪಿಯ ಭದ್ರ ಕೋಟೆಯಾಗಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಮಧಾರಿ ಸಮುದಾಯವು ಪ್ರತಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ದಾರಿಯಲ್ಲಿ ಮುನ್ನುಗ್ಗುತ್ತಿರುವ ಅವರ ಪುತ್ರ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲ ವೇಳೆ ನಾಮಧಾರಿ ಈಡಿಗ ಹಾಗೂ ಬಿಲ್ಲವ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು ತಪ್ಪಾಗಲಾರದು.
ಬಡವರ ಬಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಬಳಿಕ ತೆರವುಗೊಂಡಿದ್ದ ಸಮುದಾಯದ ನೇತಾರ ಸ್ಥಾನವನ್ನು, ಸಂಪುಟ ಸಚಿವ ಸ್ಥಾನದೊಂದಿಗೆ ಮಧು ಬಂಗಾರಪ್ಪ ಅವರು ಯಶಸ್ವಿಯಾಗಿ ತುಂಬುವ ವಿಶ್ವಾಸವನ್ನು ಸಮುದಾಯದ ಮುಖಂಡರುಗಳು ವ್ಯಕ್ತಪಡಿಸಿದ್ದಾರೆ. ಶಾಸಕರಾಗಿ ಹಿಂದಿನ ಅವಧಿಯಲ್ಲಿ ಮಧು ಬಂಗಾರಪ್ಪ ಅವರು ತಮ್ಮ ಸೊರಬ ಕ್ಷೇತ್ರದಲ್ಲಿ ಹತ್ತುಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಕಳೆದ ಬಾರಿ ಅಧಿಕಾರದಲ್ಲಿರದಿದ್ದರೂ ಜನರ ಸಂಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸಿದ ಕಾರಣ ಮತ್ತೆ ಕ್ಷೇತ್ರದ ಜನರು ಅವರಿಗೆ ಪುನಃ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.