ಪಠ್ಯಪುಸ್ತಕ ಪರಿಷ್ಕರಣೆ ಖಚಿತ, ಸಿಎಂ ನಿರ್ದೇಶನದಂತೆ ತಂಡ ರಚನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ | JANATA NEWS
ಬೆಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ದವಿದ್ದು, ಮಕ್ಕಳ ಭವಿಷ್ಯ, ಮಕ್ಕಳ ಚಿಂತನೆ, ಮಕ್ಕಳ ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಪಠ್ಯದಲ್ಲಿ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ನಾನು ಪ್ರಣಾಳಿಕೆಯ ಉಪಾಧ್ಯಕ್ಷನಾಗಿದ್ದೆ. ಅದರಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ, ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ ಎಂದು ಭರವಸೆ ನೀಡಿದ್ದೇವೆ. ಅದರಂತೆ ಮಕ್ಕಳ ಚಿಂತನೆ ಕಲ್ಮಶವಾಗಬಾರದು ವಿದ್ಯಾಭ್ಯಾಸದಲ್ಲಿ ಅಡಚಣೆ ಆಗಬಾರದು. ಹಾಗಾಗಿ ಇದರಲ್ಲಿರುವ ತಪ್ಪುಗಳನ್ನು ಸರ್ಕಾರದ ಕಡೆಯಿಂದ, ನನ್ನ ಕಡೆಯಿಂದ ತೆರವು ಮಾಡುವ ಕೆಲಸ ಮಾಡುತ್ತೇವೆ.
ಈ ಸಂಬಂಧ ಈಗಾಗಲೇ ಸಿಎಂ ನಿರ್ದೇಶನದಂತೆ ನಾನೇ ಒಂದು ತಂಡವನ್ನು ರಚಿಸಿಕೊಳ್ಳುತ್ತಿದ್ದೇನೆ. ಇನ್ನೆರಡು ದಿನಗಳಲ್ಲಿ ತಂಡ ರಚನೆಯಾಗಲಿದೆ ಒಂದನೇ ತಾರೀಕು ಸಚಿವ ಸಂಪುಟ ಸಭೆ ಇದೆ. ಅಂದು ಇದರ ಬಗ್ಗೆ ಒಂದು ಚಿತ್ರಣ ಸಿಗಲಿದೆ. ಪಠ್ಯಪುಸ್ತಕದಲ್ಲಿನ ಎಲ್ಲವನ್ನು ಕೂಡ ಪರಿಶೀಲನೆ ಮಾಡಿ ಮಕ್ಕಳ ಭವಿಷ್ಯಕ್ಕೆ, ಮಕ್ಕಳ ಚಿಂತನೆಗೆ, ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಬದಲಾವಣೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಹಿಜಾಬ್ ವಿಚಾರ ಕುರಿತು ಮಾತನಾಡಿ, ಈ ಸಂಬಂಧ ಕಾನೂನುಬದ್ಧ ಹೋರಾಟ ಮುಂದುವರೆಯಲಿದೆ. ವಿಚಾರ ನ್ಯಾಯಾಲಯದ ಅಂಗಳದಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ಏನನ್ನೂ ಹೇಳುವುದಿಲ್ಲ. ಏನೇ ಹೋರಾಟ ಮಾಡಿದರೂ ಕಾನೂನು ಬದ್ಧವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು. ಇಲಾಖೆ ಅಧ್ಯಯನ ಮಾಡಲು 2-3 ತಿಂಗಳು ಕಾಲಾವಕಾಶ ಬೇಕಾಗಿದೆ.
ಮಕ್ಕಳ ಭವಿಷ್ಯದ ವಿಚಾರವಾಗಿರುವುದರಿಂದ ಬಹಳ ಜವಾಬ್ದಾರಿಯುತವಾಗಿ ನಿರ್ಧಾರಗಳ ಕೈಗೊಳ್ಳಬೇಕಾಗಿದೆ. ಹಾಗಾಗಿ ಏನೇ ನಿರ್ಧಾರ ಮಾಡಿದರೂ ಅಧ್ಯಯನ ಮಾಡಿ ಯೋಚಿಸಿ, ಚರ್ಚಿಸಿಯೇ ನಿರ್ಧಾರ ಮಾಡುತ್ತೇವೆ. ಆತುರದ ನಿರ್ಧಾರಕ್ಕೆ ಮುಂದಾಗಲ್ಲ ಎಂದು ಸ್ಪಷ್ಟಪಡಿಸಿದರು.