ಅಕ್ರಮ ಗೋಸಾಗಾಟ, ನಾಲ್ವರ ಬಂಧನ | JANATA NEWS
ಮಂಗಳೂರು : ಹಸುಗಳನ್ನು ಕಸಾಯಿಕಾನೆಗೆ ಸಾಗಿಸುತ್ತಿದ್ದ ನಾಲ್ವರನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಉಳ್ಳಾಲ ನಿವಾಸಿಗಳಾದ ಅಹ್ಮದ್ ಇರ್ಷಾದ್, ಖಾಲಿದ್ ಬಿಎಂ, ಜಾಫರ್ ಸಾದಿಕ್ ಮತ್ತು ಪಯಾಝ್ ಎಂಬುವರನ್ನು ಮಂಗಳೂರು ಹೊರವಲಯದ ಕಲ್ಲಾಪು ಬಳಿ ಬಂಧಿಸಲಾಗಿದೆ. ಖಾಲಿದ್ ನೆರೆಯ ಕೇರಳದ ಕಾಸರಗೋಡು ಜಿಲ್ಲೆಯ ಬಂಗ್ರ ಮಂಜೇಶ್ವರದವರಾಗಿದ್ದು, ಉಳಿದವರು ಉಳ್ಳಾಲದವರು.
ನಾಲ್ವರು ಆರೋಪಿಗಳು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಅಂಬ್ಲಮೊಗರು ಗ್ರಾಮದಲ್ಲಿ ಮಹಿಳೆಯೊಬ್ಬರಿಂದ ಹಸುಗಳನ್ನು ಖರೀದಿಸಿದ್ದಾರೆ. ನಂತರ ಅವುಗಳನ್ನು ವಧೆ ಮಾಡಲು ಜಿಲ್ಲೆಯ ಉಳ್ಳಾಲ ತಾಲೂಕಿನ ಅಲೇಕಲಕ್ಕೆ ಮಿನಿ ಗೂಡ್ಸ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು. ಸ್ಥಳವೊಂದರಲ್ಲಿ ವಾಹನವು ತಗ್ಗಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಅಲ್ಲಿಂದ ಮೇಲೆ ಚಲಿಸಲು ಸಾಧ್ಯವಾಗಿಲ್ಲ.
ಆಗ ವಾಹನದಲ್ಲಿದ್ದ ಮೂವರು ಕೆಳಗಿಳಿದು ವಾಹನವನ್ನು ತಳ್ಳಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಅವರ ಸಹಾಯಕ್ಕೆ ಧಾವಿಸಿ, ವಾಹನವನ್ನು ತಳ್ಳಲು ಮುಂದಾಗಿದ್ದಾರೆ. ಇದೇ ವೇಳೆ ವಾಹನದೊಳಗೆ ಹಸುಗಳಿಗೆ ಟಾರ್ಪಲ್ ಹೊದಿಸಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಅನುಮಾನಗೊಂಡು ನಾಲ್ವರನ್ನು ವಿಚಾರಿಸಿದಾಗ, ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂಧಿತ ನಾಲ್ವರ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋಹತ್ಯೆ ತಡೆ ಕಾಯ್ದೆಯ ಸೆಕ್ಷನ್ 4, 5, 7 ಮತ್ತು 12, ಸೆಕ್ಷನ್ 11(1) (ಎ), 11 (ಇ), 11 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ. ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.