ಉಚಿತ, ಖಚಿತ ಎಂದು ಸುಳ್ಳು ಹೇಳಿಕೊಂಡು ಓಡಾಡಿ ಅಧಿಕಾರಕ್ಕೆ ಬಂದವರು ವಿಪಕ್ಷಗಳ ಮೇಲೆ ಆರೋಪಿಸುತ್ತಿರುವ ಹಾಸ್ಯಾಸ್ಪದ! | JANATA NEWS
ಬೆಂಗಳೂರು : ಉಚಿತ, ಖಚಿತ ಎಂದು ಸುಳ್ಳು ಹೇಳಿಕೊಂಡು ಓಡಾಡಿ ಅಧಿಕಾರಕ್ಕೆ ಬಂದವರು ಇವತ್ತು ಜನರನ್ನು ವಿದ್ಯುತ್ ದುರ್ಬಳಕೆ ಮಾಡಿಕೊಳ್ಳಲು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.
ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ ವೇದಿಕೆ ಸಿದ್ಧ ಮಾಡಿದ್ದವರೇ ನೀವು, ಚುನಾವಣಾ ಪೂರ್ವದಲ್ಲಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಎಂದು ಹೇಳಿದ್ದ ನೀವು ಈಗ ಷರತ್ತು ವಿಧಿಸಿದ್ದಿರಿ. ವಿನಾಕಾರಣ ಜನರನ್ನು ಪ್ರತಿಪಕ್ಷಗಳು ದಾರಿ ತಪ್ಪಿಸುತ್ತಿವೆ ಎಂಬ ಆರೋಪ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಬಾರಿ ಇಂಧನ ಸಚಿವರು ಯಾರಿದ್ರು, ಸಿಎಂ ಯಾರಿದ್ರು, ಇವರೇ ತಾನೇ ಇದ್ದಿದ್ದು, ಆಗ ಏಕೆ ಈ ಬಗ್ಗೆ ಯೋಚನೆ ಮಾಡಿಲ್ಲ. ಸಿದ್ದರಾಮಯ್ಯನವರೇ ಎಲ್ಲರಿಗೂ 200 ಯುನಿಟ್ ಉಚಿತ ಎಂದು ಹೇಳಿದ್ದು ನೀವೆ ಅಲ್ಲವೇ? ಒಂದು ಮನೆಯಲ್ಲಿ ಮೂರು ಮಹಡಿ ಕಟ್ಟಿರುತ್ತಾರೆ. ಮೀಟರ್ ಒಬ್ಬರ ಹೆಸರಿನಲ್ಲಿ ಇರುತ್ತದೆ. ಆಗ ಬಾಡಿಗೆದಾರರು ಏನು ಮಾಡಬೇಕು.
ನಾವು ಪ್ರತಿಪಕ್ಷದಲ್ಲಿ ಇರುವುದೇ ಯುದ್ಧ ಮಾಡಲು, ಇದನ್ನೇ ಮಾಡೋದು. ಬಾಡಿಗೆದಾರರಿಗೆ, ಹೊಸಮನೆ ಕಟ್ಟಿದವರಿಗೆ ಉಚಿತ ವಿದ್ಯುತ್ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಉಪಮುಖ್ಯಮಂತ್ರಿ ಸ್ನೇಹಕ್ಕೂ ಸಿದ್ಧ, ಯುದ್ಧಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಜನ ನಮ್ಮನ್ನು ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಿರುವುದು ಸ್ನೇಹ ಮಾಡಲು ಅಲ್ಲ, ಯುದ್ಧ ಮಾಡಲು. ಜನಪರವಾದ ಹೋರಾಟವನ್ನು ಮಾಡುತ್ತೇವೆ. ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಡೂಪ್ಲಿಕೇಟ್ ಆಗಿವೆ ಎಂದು ಹೆಚ್ಡಿಕೆ ಕಿಡಿಕಾರಿದರು.
ತುಳಿತಕ್ಕೆ ಒಳಗಾದ ವರ್ಗಗಳಿಗೆ ಸುಲಭವಾಗಿ ಈ ಯೋಜನೆಗಳು ಸಿಗುವುದಿಲ್ಲ. ಬಡವರಿಗೆ ಬದುಕು ಕಟ್ಟಿಕೊಳ್ಳಲು ನಮ್ಮ ಸಹಮತವಿದೆ. ಆದರೆ, ಜನರ ತೆರಿಗೆ ಹಣದಿಂದ ಇಂತಹ ಕಾರ್ಯಕ್ರಮ ನೀಡಲಾಗುತ್ತದೆ. ಬಿಜೆಪಿ ನಿನ್ನೆ ಯಾವ ಪುರುಷಾರ್ಥಕ್ಕೆ ಧರಣಿ ಮಾಡಿದೆ. ಅಧಿಕಾರದಲ್ಲಿದ್ದಾಗ ವಿದ್ಯುತ್ ದರ ಏರಿಕೆಗೆ ಬಿಜೆಪಿ ಅರ್ಜಿ ಹಾಕಿರಲಿಲ್ಲವೇ, ಆಗ ನಿಮಗೆ ಪರಿಜ್ಞಾನವಿರಲಿಲ್ಲವೆ? ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆ ಜನರು ಎಚ್ಚರಿಕೆ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಮೇಕದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಐದು ವರ್ಷದಲ್ಲಿ ಪೂರ್ಣಗೊಳಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡರೆ ನಾವು ಸಹಕಾರ ಕೊಡುತ್ತೇವೆ. ಇಲ್ಲದಿದ್ದರೆ ಜನರನ್ನು ಜಾಗೃತಿಗೊಳಿಸಲು ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈಗಿನ ಮುಖ್ಯಮಂತ್ರಿಗಳು ಸರ್ವವನ್ನೂ ಬಲ್ಲವರು. ಈಗಾಗಲೇ 13 ಬಜೆಟ್ ಗಳನ್ನು ಮಂಡಿಸಿದ್ದಾರೆ. ಇನ್ನೇನು 14ನೇ ಬಜೆಟ್ ಅನ್ನೂ ಮಂಡಿಸಲಿದ್ದಾರೆ. ರಾಜ್ಯದ ಹಣಕಾಸು ಬಗ್ಗೆ, ಆರ್ಥಿಕತೆ ಬಗ್ಗೆ ಅವರಿಂತ ಬಲ್ಲ ಜ್ಞಾನಿಗಳು ಯಾರಿದ್ದಾರೆ? ಮುಂದೇನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿರಬೇಕು. ಅದು ಬಿಟ್ಟು ಜನರನ್ನು ಪ್ರತಿಪಕ್ಷಗಳು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದರು.