ತೆರಿಗೆದಾರರು ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ಕೇಳುತ್ತಿಲ್ಲ: ಡಿಕೆ ಶಿವಕುಮಾರ್ | JANATA NEWS
ಬೆಂಗಳೂರು : ತೆರಿಗೆ ಪಾವತಿ ಮಾಡುವವರು ಯಾರೂ ನಮಗೆ ಗೃಹಲಕ್ಷ್ಮಿ ಬೇಕು ಅಂತ ಕೇಳುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪ್ರತಿ ಮನೆಯ ಯಜಮಾನಿಗೆ 2,000 ರೂ. ನೀಡುವ ಈ ಯೋಜನೆಯನ್ನು ಬಡವರನ್ನು ಗಮನದಲ್ಲಿಟ್ಟುಕೊಂಡು ಹಮ್ಮಿಕೊಳ್ಳಲಾಗದೆಯೇ ವಿನಃ ಆದಾಯ ತೆರಿಗೆ ಪಾವತಿಸುವವರಿಗಲ್ಲ ಎಂದು ಅವರು ಹೇಳಿದ್ದಾರೆ.
ಪ್ರತಿ ರೂಪಾಯಿಗೆ ಉತ್ತರದಾಯಿತ್ವ ಇರಬೇಕು. ಬಡವರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಿದ್ದೇವೆ. ಐಟಿ ರಿಟರ್ನ್ಸ್ ಸಲ್ಲಿಸುವ ಜನರು ಅದನ್ನು ಕೇಳುತ್ತಿಲ್ಲ. 2000 ರೂಪಾಯಿ ಬೇಡ ಎಂದು ಹಲವರು ಪತ್ರ ಬರೆದಿದ್ದಾರೆ. ಆ ವ್ಯಕ್ತಿಗಳ ಹೆಸರನ್ನು ನಾನು ಬಹಿರಂಗಪಡಿಸಲಾರೆ. ನಾವು ಸರ್ಕಾರ ನಡೆಸುತ್ತಿದ್ದೇವೆ ಮತ್ತು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮನೆ, ಸಂಸಾರ ಯಾರು ನಡೆಸುತ್ತಾರೆ ಅಂತ ಅವರ ಹೇಳಬೇಕು. ಅವರ ಮನೆ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ. ಒಂದು ಮನೆಗೆ ಒಂದು. ವೋಟರ್ ಲಿಸ್ಟ್ ನಲ್ಲಿ ಯಾರ ಮನೆ ಇದೆ ಅನ್ನೋ ಲೆಕ್ಕ ಇದೆ. ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಎಲ್ಲಾ ಲೆಕ್ಕ ಇದೆ. ಫಸ್ಟ್ ನೇಮ್ ಕೊಡಬೇಕಾ, ಸೆಕೆಂಡ್ ನೇಮ್ ಕೋಡಬೇಕಾ? ಹೆಣ್ಣುಮಕ್ಕಳು ತೀರ್ಮಾನ ಮಾಡಬೇಕು ಎಂದರು.
ಗ್ಯಾರಂಟಿ ಘೋಷಣೆ ಮಾಡೋವಾಗ ಕಂಡಿಷನ್ ಇರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸರ್ಕಾರ. ಸರ್ಕಾರ ನಡೆಸೋದು. ನಾವ್ ಏನ್ ಕೊಡಬೇಕು ಅಂತ ನಾವು ಹೇಳಿದ್ದೇವೆ. ಜನ ಕೇಳಿದ್ದಾರೆ. ಬಾಡಿಗೆ ಮನೆ ವಿಚಾರ ಬಂತು ಅದನ್ನ ಕ್ಲಿಯರ್ ಮಾಡಿದ್ದೇವೆ.
ಬಿಜೆಪಿ ಮತ್ತು ಜೆಡಿಎಸ್ ನಮ್ಮ ಮೇಲೆ ಅಸೂಯೆ ಹೊಂದಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ. ಅಸೂಯೆಗೆ ಔಷಧಿ ಇಲ್ಲ. ಬಿಜೆಪಿ ನಾಯಕರು ಆತಂಕದಲ್ಲಿದ್ದಾರೆ. ಅವರು 15 ಲಕ್ಷ ರೂಪಾಯಿ ನೀಡುವ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಈಡೇರಿಸುವತ್ತ ಗಮನ ಹರಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.