ಗಂಗಾ ಆರತಿಯಲ್ಲಿ ಭಾಗವಹಿಸಿದ ಜಿ-20 ಸದಸ್ಯರ ಅಭಿವೃದ್ಧಿ ಸಚಿವರು, ವಿದೇಶಿ ಪ್ರತಿನಿಧಿಗಳು | JANATA NEWS
ಕಾಶಿ : ಕಾಶಿಯಲ್ಲಿ ಜಿ-20 ಸದಸ್ಯರ ಅಭಿವೃದ್ಧಿ ಸಚಿವರ ಸಭೆಯಲ್ಲಿ ಭಾಗವಹಿಸಲು ಬಂದ ವಿದೇಶಿ ಪ್ರತಿನಿಧಿಗಳು ಭಾನುವಾರ ಸಂಜೆ ಗಂಗಾ ಆರತಿಯಲ್ಲಿ ಭಾಗವಹಿಸಿದರು.
ಕಾಶಿಗೆ ಆಗಮಿಸಿದ ವಿದೇಶಿ ಅತಿಥಿಗಳು ದಶಾಶ್ವಮೇಧ ಘಾಟ್ನಲ್ಲಿ ಆಯೋಜಿಸಿದ್ದ ಗಂಗಾ ಆರತಿಯಲ್ಲಿ ಪಾಲ್ಗೊಂಡು ಶಂಖ, ಗಂಟೆ, ಡೋಲು, ಗಂಗೆ ಮಾತೆಯ ಜಯಘೋಷಗಳ ನಡುವೆ ನಡೆದ ಗಂಗಾ ಆರತಿಯನ್ನು ಕಣ್ತುಂಬಿಕೊಂಡರು. ವಿದೇಶಿ ಅತಿಥಿಗಳಿಗೆ ವಿಶೇಷ ಆರತಿ ಏರ್ಪಡಿಸಲಾಗಿದ್ದು, ಒಂಬತ್ತು ಅರ್ಚಕರು ಗಂಗಾ ಮಾತೆಯ ಆರತಿಯನ್ನು ನೆರವೇರಿಸಿದರು.
ಜಿ-20 ದೇಶಗಳ ಅಭಿವೃದ್ಧಿ ಮಂತ್ರಿಗಳು ಸೇರಿದಂತೆ 200 ವಿದೇಶಿ ಅತಿಥಿ ಪ್ರತಿನಿಧಿಗಳ ನೇತ್ರತ್ವವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಮಂತ್ರಿ ಡಾ.ಜೈಶಂಕರ್ ವಹಿಸಿದ್ದರು.
ಈ ಸಂದರ್ಭದಲ್ಲಿ ದಶಾಶ್ವಮೇಧ ಘಾಟ್ ಅನ್ನು ಹೂವಿನ ಹಾರ ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಧಿದೇವ ಮಹಾದೇವನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಣಪತಿ ಪೂಜೆಯೊಂದಿಗೆ ಗಂಗಾ ಆರತಿ ಆರಂಭವಾಯಿತು.