ನಮ್ಮ ಸರ್ಕಾರವು ವಿದ್ಯುತ್ ದರ ಹೆಚ್ಚಳ ಆದೇಶ ಮಾಡಿಲ್ಲ, ಮಾಜಿ ಸಿಎಂ ಬೊಮ್ಮಾಯಿ ಸ್ಪಷ್ಟನೆ | JANATA NEWS
ಹಾವೇರಿ : ನಮ್ಮ ಕಾಲದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದಿಂದಲೇ ವಿದ್ಯುತ್ ದರ ಹೆಚ್ಚಳದ ಆಜ್ಞೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೆ.ಇ.ಆರ್.ಸಿ ಅದೊಂದು ಸ್ಟೆಚುಟರಿ ಬಾಡಿಯವರು ಮಾರ್ಚ್ನಲ್ಲಿ ಹೆಚ್ಚಳದ ಪ್ರಸ್ತಾವನೆ ಕೊಟ್ಟರೂ, ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ನಾವು ವಿದ್ಯುತ್ ದರ್ ಹೆಚ್ಚಳದ ಯಾವುದೇ ಆದೇಶ ಮಾಡಿಲ್ಲ. ಕಾಂಗ್ರೆಸ್ನವರು ಬಂದ ಮೇಲೆಯೇ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಅವರ ಆಜ್ಞೆಯಿಂದಲೇ ವಿದ್ಯುತ್ ದರ ಹೆಚ್ಚಳ ಆಗಿದೆ ಎಂದರು.
ಏಪ್ರಿಲ್ನಿಂದ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಇದು ಬಹಳ ದೊಡ್ಡ ಭಾರ ಇದೆ. ಬರುವ ದಿನಗಳಲ್ಲಿ ಎಲೆಕ್ಟ್ರಿಸಿಟಿ ಕ್ಷೇತ್ರ ಬಹಳ ಸಂಕಷ್ಟಕ್ಕೆ ಈಡಾಗಲಿದೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಗೆ ಹಣ ಕೊಡಬೇಕು. ಒಂದು ವರ್ಷ ಬಿಟ್ಟು ಸಬ್ಸಿಡಿ ಕೊಟ್ಟರೆ ಆಗಲ್ಲ. ಮುಂಗಡವಾಗಿ ಸಬ್ಸಿಡಿ ಕೊಡಬೇಕು ಎಂದರು.
ಬಸ್ನಲ್ಲಿ ಅಧಿಕ ಮಂದಿ ಪ್ರಯಾಣ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೂ ಬಹಳ ತೊಂದರೆ ಆಗುತ್ತಿದೆ. ಹೀಗಾಗಿ, ಶಾಲಾ ಮಕ್ಕಳು ಬಸ್ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುತ್ತಿದ್ದಾರೆ. ಹಾನಗಲ್ ತಾಲೂಕಿನಲ್ಲಿ ಸೋಮವಾರ ಒಂದು ಅನಾಹುತ ಕೂಡ ಆಗಿದೆ. ಈ ತರ ಆಗದ ಹಾಗೆ ನೋಡಿಕೊಳ್ಳಬೇಕು. ವ್ಯವಸ್ಥೆ ಹದಗೆಡಬಾರದು. ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಶಾಲಾ ಮಕ್ಕಳಿಗೆ ಸ್ಕೂಲ್ ಬಸ್ ಕೊಡಬೇಕು ಎಂದು ಈಗಾಗಲೇ ನಾವು ಆಜ್ಞೆ ಕೂಡ ಮಾಡಿದ್ದೇವೆ. ಇದಕ್ಕೆ ಬಜೆಟ್ನಲ್ಲಿ ಹಣ ಕೂಡ ಇಟ್ಟಿದ್ದೇವೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಿಗೆ ಸರಿಯಾಗಿ ಹಣ ಕೊಟ್ಟು ನಿರ್ವಹಿಸದೇ ಇದ್ದರೆ, ಸಾರಿಗೆ ಸ್ಥಗಿತ ಆಗುವುದು, ವಿದ್ಯುತ್ ಶಕ್ತಿ ನಿಲ್ಲುವುದು ಗ್ಯಾರಂಟಿ ಆಗುತ್ತದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.