ಪರಪುರುಷನ ಜತೆಗಿನ ಸಂಬಂಧಕ್ಕಾಗಿ ತನ್ನ ಸ್ನೇಹಿತರೊಂದಿಗೆ ಸೇರಿ ಗಂಡನನ್ನೇ ಕೊಂದ ಪತ್ನಿ | JANATA NEWS
ಬೆಳಗಾವಿ : ಪರಪುರುಷನ ಜತೆಗಿನ ಸಂಬಂಧಕ್ಕಾಗಿ ಪತ್ನಿ ತನ್ನ ಸ್ನೇಹಿತರೊಂದಿಗೆ ಸೇರಿ ಗಂಡನನ್ನೇ ಕೊಂದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಇದೀಗ ನಾಲ್ವರು ಆರೋಪಿಗಳನ್ನ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ (38) ಕೊಲೆಯಾದ ದುರ್ದೈವಿ. ರಮೇಶ್ ಕಾಂಬಳೆ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಮನೆಯಲ್ಲಿ ಮೊಬೈಲ್ ಬಿಟ್ಟು ದಿಢೀರ್ ಮಾ.28ರಂದು ಬೆಳಗಾವಿಯಿಂದ ನಾಪತ್ತೆಯಾಗಿದ್ದ. ಏಪ್ರಿಲ್ 5ರಂದು ಗಂಡ ರಮೇಶ್ ನಾಪತ್ತೆ ಆಗಿದ್ದಾನೆಂದು ಪತ್ನಿ ಸಂಧ್ಯಾ ದೂರು ನೀಡಿದ್ದಳು. ಪತಿ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆ ಎಂದು ಕಥೆ ಕಟ್ಟಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ರಮೇಶ್ ಪತ್ನಿ ಸಂಧ್ಯಾ ಹಾಗೂ ರಮೇಶ್ ಸ್ನೇಹಿತರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾವೇ ಕೊಲೆ ಮಾಡಿರುವುದಾಗಿ ರಮೇಶ್ ಪತ್ನಿ ಹಾಗೂ ಸ್ನೇಹಿತರು ಬಾಯ್ಬಿಟ್ಟಿದ್ದಾರೆ.
ರಮೇಶ್ ಕಾಂಬಳೆಯ ಸ್ನೇಹಿತ ಬಾಳು ಬಿರಂಜೆ ಹಾಗೂ ಪತ್ನಿ ಸಂಧ್ಯಾ ಮಧ್ಯೆ ಅನೈತಿಕ ಸಂಬಂಧ ಇತ್ತು. ಈ ಸಂಬಂಧಕ್ಕೆ ರಮೇಶ್ ಅಡ್ಡಿಯಾಗಿದ್ದ. ಅದಕ್ಕಾಗಿ ರಮೇಶ್ಗೆ ನಿದ್ರೆ ಮಾತ್ರೆಯನ್ನ ನೀಡಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಸಂದ್ಯಾ, ಬಾಳು ಬಿರಂಜೆ ಹಾಗೂ ಆತನ ಸ್ನೇಹಿತರು ಜೊತೆಗೂಡಿ ಕೊಲೆ ಮಾಡಿ, ಗೋವಾದ ಚೋರ್ಲಾ ಘಾಟ್ನಲ್ಲಿ ಶವ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ.