ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಈಶ್ವರಪ್ಪ, ನಾನು ಎಲ್ಲೋ ಕುರಿ ಕಾಯುತ್ತಾ ಇರಬೇಕಾಗಿತ್ತು! | JANATA NEWS
ಬೆಂಗಳೂರು : ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಈಶ್ವರಪ್ಪ, ನಾನು ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೂತನ ಶಾಸಕರಿಗೆ ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಪ್ರತಿಯೊಬ್ಬರೂ ಸದನ ನಡೆಯುವಾಗ ನಿಯಮಾವಳಿ ತಪ್ಪದೇ ಓದಬೇಕು. ಅಸೆಂಬ್ಲಿಯನ್ನು ದೇಗುಲ ಎನ್ನುತ್ತೇವೆ. ಜನರ ಜತೆ ಚೆನ್ನಾಗಿದ್ದು, ಅವರ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸಬೇಕು.
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಿ ಎಂದರು.
ನಾನು ಕಾಂಗ್ರೆಸ್ ಮುಖ್ಯಮಂತ್ರಿಯಲ್ಲ, ರಾಜ್ಯಕ್ಕೆ ಮುಖ್ಯಮಂತ್ರಿ. ಮತ ಹಾಕದವರಿಗೂ ಮುಖ್ಯಮಂತ್ರಿ. ಈ ಭಾವನೆ ನಮ್ಮಲ್ಲಿರಬೇಕು. ಸಂವಿಧಾನವನ್ನು ಎಲ್ಲರೂ ತಿಳಿದುಕೊಳ್ಳಿ, ಇಲ್ಲದೇ ಹೋದರೆ ಒಳ್ಳೆಯ ಸಂಸದೀಯ ಪಟುವಾಗಲು ಸಾಧ್ಯವಿಲ್ಲ ಎಂದರು.
ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮ ಬದ್ಧವಾಗಿ ಸದನದ ಮುಂದೆ ಮಂಡಿಸಬಹುದು. ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯ ಎಂದರು.
ರಾಜಕಾರಣ ಇರುವುದು ಜನ ಸೇವೆಗಾಗಿಯೇ ಹೊರತು, ಧಿಮಾಕು ತೋರಿಸಲು ಅಲ್ಲ. ರಾಜಕಾರಣಿ ಜನ ಸೇವಕ. ಇದು ಮನಸ್ಸಿನಲ್ಲಿ ಇಲ್ಲದಿದ್ದರೆ ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ಒಂದು ಬಾರಿಯಾದರೂ ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎನ್ನುವವರು, ಹತ್ತಿದ ಮೇಲೆ ಒಳಗೆ ಬರುವುದಿಲ್ಲ. ಈ ಆಟಿಟ್ಯೂಡ್ ಬಿಡಬೇಕು. ಅಧಿವೇಶನ ನಡೆಯುವಾಗ ಶಾಸಕರು ವಿಧಾನಸಭೆಯಲ್ಲಿ ಇರಬೇಕು.
ಅಧಿವೇಶನ ನಡೆಯುವಾಗ ಜನರನ್ನು ಭೇಟಿ ಮಾಡುವುದು, ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡುವುದನ್ನು ಬಿಡಬೇಕು. ಕ್ಷೇತ್ರದ ಜನರನ್ನು ನೋಡಬೇಕು, ಅಧಿಕಾರಿಗಳನ್ನು ನೋಡಬೇಕೆಂದು ಕೆಲವರು ಅರ್ಧದಿಂದಲೇ ಹೊರಟು ಬಿಡುತ್ತಾರೆ. ಕೆಲವು ಸಚಿವರೇ ಸದನಕ್ಕೆ ಬರುವುದಿಲ್ಲ. ಅಲ್ಲಿಗೆ ಬಂದರೆ ಹಿರಿಯರ ಮಾತು, ಸಂಸದೀಯ ಭಾಷೆ ಅರ್ಥವಾಗುತ್ತದೆ. ನಾವು ತಜ್ಞರಲ್ಲ, ಸತ್ವಜ್ಞರಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು ಎಂದರು. ಈಗ ಚುನಾವಣೆ ದುಬಾರಿಯಾಗುತ್ತಿದೆ. ಅರ್ಹರು, ಪ್ರಾಮಾಣಿಕರು ಶಾಸಕರಾಗುವುದು ವಿರಳ. ಕೆಲವು ಬಾರಿ ಜನಪರ ಕಾಳಜಿ ಇಲ್ಲದವರು ಗೆದ್ದು ಬರುತ್ತಾರೆ. ಅಂತವರು ಎರಡನೇ ಬಾರಿ ಗೆಲ್ಲುವುದು ಕಷ್ಟವಾಗುತ್ತದೆ. ಜನರ ಪರ ಕೆಲಸ ಮಾಡುವವರು ರಾಜಕಾರಣದಲ್ಲಿ ಉಳಿಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.