ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಾಳೆ! | JANATA NEWS
ಬೆಂಗಳೂರು : ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಾಳೆಗೆ ಮುಂದೂಡಲಾಗಿದೆ ಎಂದಿದ್ದಾರೆ ಬಿಎಸ್ ಯಡಿಯೂರಪ್ಪ.
ಬಿಜೆಪಿಯ ಶಾಸಕಾಂಗ ಸಭೆಯೇ ನಾಳೆಗೆ ಮುಂದೂಡಿಕೆ ಆಗಿದೆ. ರಾಜ್ಯ ಬಿಜೆಪಿ, ಇಂದು ಮಧ್ಯಾಹ್ನ ನಂತರ ಶಾಸಕಾಂಗ ಸಭೆ ಕರೆಯಲು ಮುಂದಾಗಿತ್ತು. ಆದರೆ ದೆಹಲಿಯಿಂದ ಬಂದಿಳಿದ ಬಿಎಸ್ವೈ ಸುದ್ದಿಗಾರರೊಂದಿಗೆ ವಿಪಕ್ಷ ನಾಯಕನ ಆಯ್ಕೆ ನಾಳೆಗೆ ಮುಂದೂಡಿಕೆಯಾಗಿದೆ ಎಂದಿದ್ದಾರೆ.
ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ ಆಗಿದ್ದು ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.
ಬಿಎಸ್ ಯಡಿಯೂರಪ್ಪ ದೆಹಲಿಗೆ ಬಿಜೆಪಿ ಹೈಕಮಾಂಡ್ ಜೊತೆಗೆ ಚರ್ಚಿಸುವುದಕ್ಕೆ ತೆರಳಿದ್ದರು. ನಿನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಕೇವಲ 8 ನಿಮಷಗಳ ಕಾಲ ಚರ್ಚಿಸಿದ್ದರು. ಈ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದಂತ ಮಾಜಿ ಸಿಎಂ ಬಿಎಸ್ ವೈ ವಿಪಕ್ಷ ನಾಯಕನ ಆಯ್ಕೆ ನಾಳೆಗೆ ಮುಂದೂಡಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ನಾನು ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆಗೆ ಸುದೀರ್ಘ ಚರ್ಚೆ ಮಾಡಲಾಗಿದೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಅಮಿತ್ ಶಾ ನಾಳೆ ತೀರ್ಮಾನ ಮಾಡುತ್ತಾರೆ. ನಾಳೆ ಎಲ್ಲವೂ ತೀರ್ಮಾನ ಆಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, "ಸದನ ಪ್ರಾಂಭವಾಗುವ ಮೊದಲೇ ವಿರೋಧ ಪಕ್ಷದ ನಾಯಕನನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದು ಗ್ಯಾರಂಟಿ ನೀಡಿದ್ದಿರಿ. ನಿಮ್ಮ ಹೈಕಮಾಂಡ್ ಕನಿಷ್ಠ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೂ ನಿಮಗೆ ಗ್ಯಾರಂಟಿ ನೀಡದಿರುವುದು ರಾಜಕೀಯ ಇತಿಹಾಸದಲ್ಲೇ ಅತ್ಯಂತ ಶೋಚನೀಯ ಸಂಗತಿ" ಎಂದು ಬಿಜೆಪಿಯ ಕಾಲೆಳೆದಿದೆ.