ಸಿಎಂ ಸಿದ್ದರಾಮಯ್ಯ ಕಚೇರಿಯಲ್ಲಿ ಲಂಚ ಕೊಡದೇ ಕೆಲಸ ಆಗೋದಿಲ್ಲ: ಕುಮಾರಸ್ವಾಮಿ ಗಂಭೀರ ಆರೋಪ | JANATA NEWS
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಕಚೇರಿಯಲ್ಲಿ ಲಂಚ ಕೊಡದೇ ಕೆಲಸ ಆಗೋದಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ ಒಂದೆರೆಡು ವರ್ಷಗಳಲ್ಲಿ ಕಾಂಗ್ರೆಸ್ ನಾಯಕರು ಜಾಗಟೆ ಹೊಡೆದ್ರಲ್ಲಪ್ಪ. ಪೇಸಿಎಂ ಅಂತ ರೋಡ್ನಲ್ಲಿ ಪೋಸ್ಟರ್ ಹಾಕಿದ್ರಲ್ಲ ಆಗ ದಾಖಲೆ ಇತ್ತಾ!? ಮಧ್ಯಪ್ರದೇಶದಲ್ಲಿ ಕೂಡ ಅದನ್ನೆ ಎಕ್ಸ್ಪೆರಿಮೆಂಟ್ ಮಾಡಲಾಗಿದೆ. ಸಿಎಂ ಕಚೇರಿ ಏನಾಗಿದೆ ಅಂತ ಜಗಜ್ಜಾಹಿರಾಗಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ದ ಕಿಡಿಕಾರಿದ್ದಾರೆ.
ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ, ಚುನಾವಣೆ ವೇಳೆ ಜನರಿಗೆ ಕೊಟ್ಟ ಆಶ್ವಾಸನೆ, ಭರವಸೆ ಯಾವ ರೀತಿ ಈಡೇರಿಸಲು ಹೊರಟ್ಟಿದ್ದೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು ರಾಜ್ಯಪಾಲರ ಭಾಷಣ ನೋಡಿದರೆ ಸರ್ಕಾರ ಐಸಿಯುಗೆ ಹೋಗುವ ಕಾಲ ಬರಲಿದೆ ಅನಿಸುತ್ತಿದೆ.
ಐಸಿಯು, ವೆಂಟಿಲೇಟರ್ ಮೇಲೆ ಈ ಸರ್ಕಾರ ನಡೆಯಬಹುದು. ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಹೋಗಲಿದೆ. ಮುಂದಿನ ಐದು ವರ್ಷಕ್ಕೆ ಏನು ಕೊಡಬೇಕೆಂಬ ಆತ್ಮವಿಶ್ವಾಸವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಸರ್ಕಾರದ ಮುಂದಿನ ಆಶಯಗಳ ಬಗ್ಗೆ ರಾಜ್ಯಪಾಲರು ಭಾಷಣ ಮಾಡುವಾಗ ಆಡಳಿತ ಪಕ್ಷದ ಯಾವ ಶಾಸಕರು ಮೇಜು ಕುಟ್ಟಿದ್ದು ನೋಡಿಲ್ಲ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಿ, ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೊರಟಿದ್ದಾರೆ. ಈ ಬೆಂಗಳೂರು ಕುಲಗೆಡಿಸಿದವರು ಯಾರು?. ಎರಡೂ ರಾಷ್ಟ್ರೀಯ ಪಕ್ಷಗಳು ಬೆಂಗಳೂರು ಕುಲಗೆಡಿಸಿದ್ದಾರೆ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.
ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರು ಕುಲಗೆಡಿಸಿದವರು ಯಾರು? ಬೆಂಗಳೂರು ಯಾಕೆ ಈ ಪರಿಸ್ಥಿತಿಗೆ ಬಂತು, ನಿಮ್ಮ ಯೋಗ್ಯತೆಗೆ ಮಾಸ್ಟರ್ ಪ್ಲಾನ್ ಬಿಡುಗಡೆ ಮಾಡಬೇಕಿತ್ತು. ಯಾಕೆ ಬಿಡಿಎ ಇಟ್ಕೊಂಡಿದ್ದೀರಾ? ಬೆಂಗಳೂರನ್ನ ಐದು ಆರು ಡಿವಿಷನ್ ಮಾಡ್ತಾರಂತೆ, ಹೀಗೆ ಮಾಡಿದ್ರೆ ಮಣ್ಣು ಹಾಕಿಕೊಳ್ಳಬೇಕು. ಬೆಂಗಳೂರು ಕೆರೆ ನಾಶ ಮಾಡಿದ್ದಾರೆ. ಬೆಂಗಳೂರು ಕೆರೆ ಉಳಿಸಿಕೊಂಡಿದ್ರೆ ಈ ಪರಿಸ್ಥಿತಿ ಬರುತ್ತಾ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಸರ್ಕಾರದಲ್ಲಿ ಸಿಂಡಿಕೇಟ್ಗಳಿವೆ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ, ಸಾರಿಗೆ ಇಲಾಖೆ ವರ್ಗಾವಣೆಯಲ್ಲೂ ಒಂದು ಸಿಂಡಿಕೇಟ್ ಇದೆ. ಮೊದಲ ಬಾರಿಗೆ ಕಮರ್ಷಿಯಲ್ ಇಲಾಖೆಯಲ್ಲೂ ಸಿಂಡಿಕೇಟ್ ಶುರುವಾಗಿದೆ. ಅದಕ್ಕೆ ವೈಎಸ್ಟಿ ಇದೆ ಎಂದು ಹೇಳಿದ್ದೆ. ಸಿಂಡಿಕೇಟ್ಗಳು ವರ್ಗಾವಣೆ ದಂಧೆ ಮಾಡುತ್ತಾರೆ. ಇವರು ಸರ್ಕಾರದ ಮುಂದೆ ತೆಗೆದುಕೊಂಡು ಹೋಗುತ್ತಾರೆ ಎಂದು ಕುಮಾರ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.