ಹೆಚ್ಡಿಕೆ ಪೆನ್ಡ್ರೈವ್ ಬಾಂಬ್: ಸಮಯ ಬಂದಾಗ ಬಹಿರಂಗಪಡಿಸುವೆ | JANATA NEWS
ಬೆಂಗಳೂರು : ವಿಧಾನಸಭಾ ಕಲಾಪಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಸೆಯಿಂದ ಪೆನ್ ಡ್ರೈವ್ ತೆಗೆದು ತೋರಿಸಿ ರಾಜ್ಯ ಕಾಂಗ್ರೆಸ್ ಸರಕಾರದ ಅಕ್ರಮಗಳನ್ನು ಬಯಲು ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪೆನ್ ಡ್ರೈವ್ ಪ್ರದರ್ಶಿಸಿದ ಹೆಚ್ಡಿಕೆ ಸಮಯ ಬಂದಾಗ ದಾಖಲೆ ಬಹಿರಂಗಪಡಿಸುತ್ತೇನೆ. ಬೇಕು ಅಂತಾ ರೆಡಿ ಮಾಡಿಟ್ಟುಕೊಂಡಿದ್ದೇನೆ. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇದು ವರ್ಗಾವಣೆ ದಂಧೆಯದ್ದೇ ಪೆನ್ ಡ್ರೈವ್. ಈ ಪೆನ್ ಡ್ರೈವ್ನಲ್ಲಿ ಸಚಿವರೊಬ್ಬರ ಆಡಿಯೋ ಇದೆ. ವರ್ಗಾವಣೆ ದಂಧೆಗೆ ಹಣ ಕೇಳಿರೋದು ಅದರಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ. ತಾಜ್ ವೆಸ್ಟೆಂಡ್ದ್ದು ಬಾಕಿ ಬಿಲ್ ಕಾಂಗ್ರೆಸ್ಗೆ ಕಳಿಸಿದ್ರಾ?. ನಾನೇನು ಬೀದಿಲಿ ಹೋಗುವವನಾ?. 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಬ್ಲ್ಯೂಫಿಲ್ಮ್ಂ ಅನ್ನು ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂಧನ ಇಲಾಖೆಯಲ್ಲಿ ತಲಾ ಹತ್ತು ಕೋಟಿ ರೂ.ಗಳಿಗೆ ವರ್ಗಾವಣೆಯಾಗಿದೆ. ಆ ಅಧಿಕಾರಿ ದಿನಕ್ಕೆ ಐವತ್ತು ಲಕ್ಷ ರೂ. ಕಮಿಷನ್ ಹೊಡೆಯುತ್ತಾನೆ” ಎಂದು ಗಂಭೀರ ಆರೋಪ ಮಾಡಿದರು.
”ಮಂಡ್ಯದಲ್ಲಿ ವರ್ಗಾವಣೆ ಆಯಿತು, ತನಿಖೆಯಾದವರನ್ನು, ಸಸ್ಪೆಂಡ್ ಆದವರನ್ನು ಮತ್ತೆ ತೆಗೆದುಕೊಂಡಿದ್ದಾರೆ. ಲಾಟರಿ ದಂಧೆ ನಡೆಸಿದವರನ್ನು ಹೊರ ಕಳುಹಿಸಿದವನು ನಾನು. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ವರ್ಗಾವಣೆ ದಂಧೆಯದ್ದೇ ಪೆನ್ ಡ್ರೈವ್ ನನ್ನ ಬಳಿ ಇದೆ” ಎಂದು ಪರೋಕ್ಷವಾಗಿ ಚೆಲುವರಾಯ ಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
”ಈ ಸರ್ಕಾರದಲ್ಲಿ ‘ನಗದು ಅಭಿವೃದ್ಧಿ ಇಲಾಖೆ’ ಇದೆ ಎಂದು ಯಾರೋ ಹೇಳಿದ್ದಾರೆ. ನಗರಾಭಿವೃದ್ಧಿ ಇಲಾಖೆ ಬಗ್ಗೆ ಗೊತ್ತು.ಆಮೇಲೆ ಅದು ಏನೆಂದು ಗೊತ್ತಾಯಿತು” ಎಂದು ಸರಕಾರದ ವಿರುದ್ಧ ವ್ಯಂಗ್ಯವಾಡಿದರು.
ನೆರೆ ಪರಿಹಾರ ಹಣದಲ್ಲಿ ಮಜಾ ಮಾಡಿದವರು ನೀವು. ಸಮಯ ಬರಲಿ. ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದ ಕುಮಾರಸ್ವಾಮಿ, ಸಮಯ ಬರಲಿ ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ. ಮೈ ಕೈ ಪರಚಿಕೊಳ್ಳುವುದು ಬೇಡ ಅಂತಾ ಗುಂಡೂರಾವ್ ಹೇಳಿದರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ?. ಸೋತಾಗ್ಲೂ ಜನರ ಕಷ್ಟ-ಸುಃಖ ಕೇಳಿದ್ದೇವೆ. ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು?. ಆಸ್ತಿ ಈಗ ಎಷ್ಟಿದೆ ತನಿಖೆ ಮಾಡಲಿ ಎಂದು ಸವಾಲೆಸೆದರು.. ಅವರು ಮೈಕೈ ಪರಚಿಕೊಳ್ಳೋದು ಬೇಡ. ಅಧಿಕಾರ ಇದ್ದಾಗಲೂ, ಇಲ್ಲದಾಗಲೂ ಹಾಗೇ ಇದ್ದೇವೆ ಎಂದು ಟಾಂಗ್ ನೀಡಿದರು.
ಬೆಂಗಳೂರಿನಲ್ಲಿ ಟನಲ್ ನಿರ್ಮಾಣ ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿ, ಟನಲ್ ಹೊಡಿಯೋಕೆ ಹೋಗಿ ಬೆಂಗಳೂರು ಸಮಾಧಿ ಮಾಡಿಬಿಟ್ಟಿರಾ. ಬೆಂಗಳೂರು ಅಭಿವೃದ್ಧಿ ಮಾಡೋಕೆ ಹೋಗಿ ಈಗಾಗಲೇ ಸಮಾಧಿ ಮಾಡಿದ್ದೀರಾ. ಬೆಂಗಳೂರು ಅಭಿವೃದ್ಧಿಗೆ ತಾಂತ್ರಿಕವಾಗಿ, ಪ್ರಾಯೋಗಿಕವಾಗಿ ಕೆಲಸ ಮಾಡಿ. ಟನಲ್ ಮಾಡೋಕೆ ಹೋಗಿ ಸಮಾಧಿ ಮಾಡಬೇಡಿ. 1999ರಿಂದ ಹೇಗೆ ಅಭಿವೃದ್ದಿ ಮಾಡಿದ್ದೀರಿ ಎಂದು ಗೊತ್ತಿದೆ. ಎಷ್ಟು ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಕಂಡಿದ್ದೇವೆ ಎಂದು ಕಿಡಿ ಕಾರಿದರು.