ಸಿಎಂ ಆಗಿದ್ದಾಗ ವರ್ಗಾವಣೆಯಲ್ಲಿ ದಂಧೆ ನಡೆಸಿದ್ದೇನೆ ಎಂದು ಸಾಬೀತಾದರೇ ರಾಜಕೀಯ ನಿವೃತ್ತಿ ಘೋಷಿಸುವೆ! | JANATA NEWS
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವಧಿಯಲ್ಲೂ ವರ್ಗಾವಣೆ ದಂಧೆ ನಡೆದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆ ವಿಚಾರದಲ್ಲಿ ನನ್ನ ಮಕ್ಕಳು ಭಾಗಿಯಾಗಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಮಕ್ಕಳಿಂದ ಅಧಿಕಾರ ದುರ್ಬಳಕೆ ಆಗಿದ್ದರೇ ದಾಖಲೆ ನೀಡಿ. ಸಾಬೀತಾದರೇ ರಾಜಕೀಯ ನಿವೃತ್ತಿ ಘೋಷಿಸುವೆ ಎಂದು ವಿಧಾನಸೌಧದಲ್ಲಿ ಹೇಳಿದ್ದಾರೆ.
ಈ ಸರ್ಕಾರ ದಿನದ 24 ಗಂಟೆಯೂ ವರ್ಗಾವಣೆ ದಂಧೆಯನ್ನೇ ನಡೆಸುತ್ತಿದೆ. ಅಭಿವೃದ್ಧಿ ಬದಲು ನಗದು ಅಭಿವೃದ್ಧಿಯಲ್ಲಿ ತೊಡಗಿದೆ. ಇದನ್ನು ಹೇಳಿದರೆ ನಮ್ಮ ಮೇಲೆಯೇ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸರ್ಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗಳಿಗೆ ಸಂಬಂಧಿಸಿ ನನ್ನಲ್ಲಿ ದಾಖಲೆಗಳಿವೆ. ಅದರಲ್ಲಿ ಯಾರಿಗೂ ಅನುಮಾನ ಬೇಡ. ಅದನ್ನು ಬಿಡುಗಡೆ ಮಾಡಬೇಕಾದ ಸಂದರ್ಭದಲ್ಲಿ ಮಾಡುತ್ತೇನೆ. ಯಾವಾಗ, ಎಲ್ಲಿ ಬಿಡುಗಡೆ ಮಾಡುತ್ತೇನೆ ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಹಲವಾರು ವರ್ಷಗಳು ಕೆಲಸ ಮಾಡಿದ್ದಾರೆ. ಅವರು ಎಂದಾದರೂ ದಾಖಲೆ ಬಿಡುಗಡೆ ಮಾಡಿದ್ದರಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ದಾಖಲೆ ಇಟ್ಟು ಮಾತನಾಡಿದ್ದನ್ನು ನಾನು ನೋಡಿಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಯಾವತ್ತಾದರೂ ದಾಖಲೆ ಬಿಡುಗಡೆ ಮಾಡಿದ್ರಾ?ಸಿದ್ದರಾಮಯ್ಯ ದಾಖಲೆ ಇಟ್ಟು ಮಾತನಾಡಿದನ್ನ ನೋಡಲೇ ಇಲ್ಲ. ತಾರ್ಕಿಕ ಅಂತ್ಯ ಎಂಬುದು ನನ್ನಿಂದ ಅಲ್ಲ, ಈ ದೇಶದ ವ್ಯವಸ್ಥೆ. ರಾಜಕೀಯ ಪ್ರಭಾವ, ಧನ ಬಲ ಇರುವವರಿಂದ ತಾರ್ಕಿಕ ಅಂತ್ಯ ಅಸಾಧ್ಯ ಎಂದು ಕಿಡಿಕಾರಿದರು.
ಪೆನ್ಡ್ರೈವ್ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ ಅವರು ಹೆದರಿ ಓಡೋಗಲ್ಲ, ಹಿಟ್ ಅಂಡ್ ರನ್ ಮಾಡಲ್ಲ. ಕಾಂಗ್ರೆಸ್ ನಾಯಕರು ಏನು ಮಾತಾಡ್ತಾರೆ ನೋಡೋಣ. ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ನಲ್ಲಿ ಮಾಡಿಸಿದ್ದಲ್ಲ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಏನು ಅಂತ ಹೇಳಬೇಕಲ್ಲ ಎಂದರು.