ಬಜೆಟ್ ಮಂಡನೆ ಮಾಡುವ ವೇಳೆ ಶಾಸಕರ ಸೀಟ್ ನಲ್ಲಿ ಅನಾಮಿಕ, ಬಂಧನ! | JANATA NEWS
ಬೆಂಗಳೂರು : ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಭದ್ರತಾ ಲೋಪವಾಗಿರುವುದು ವರದಿಯಾಗಿದೆ. ಬಿಗಿ ಭದ್ರತೆಯಿದ್ದರೂ ಅನಾಮಧೇಯ ವ್ಯಕ್ತಿಯೊಬ್ಬ ಆರಾಮಾಗಿ ವಿಧಾನಸಭೆಗೆ ಪ್ರವೇಶಿಸಿ ಶಾಸಕರ ಸ್ಥಾನದಲ್ಲಿ ಕುಳಿತಿದ್ದಾರೆ.
ಅನಾಮಿಕನನ್ನು ಕಂಡು ಅನುಮಾನಗೊಂಡ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ತತ್ ಕ್ಷಣ ಎದ್ದು ಹೋಗಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ತಿಳಿಸಿದ್ದಾರೆ.
ವ್ಯಕ್ತಿಯನ್ನು ಕರಿಯಪ್ಪ ಅಲಿಯಾಸ್ ತಿಪ್ಪೆರುದ್ರ ಎಂದು ಗುರುತಿಸಲಾಗಿದ್ದು, ಸುಮಾರು 15 ನಿಮಿಷಗಳ ಕಾಲ ಶಾಸಕರ ಜಾಗದಲ್ಲಿ ಕುಳಿತಿದ್ದ ತಿಪ್ಪೆರುದ್ರ ನಂತರ ಎದ್ದು ಹೋಗಿದ್ದಾನೆ.
ಸದನವನ್ನು ಪ್ರವೇಶಿಸುವಾಗ ಮಾರ್ಷಲ್ಗಳು ವಿಚಾರಿಸಿದ್ದು, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಹೆಸರು ಹೇಳಿ ಅವಾಜ್ ಹಾಕಿ ಸದನದೊಳಗೆ ಪ್ರವೇಶಿಸಿದ್ದ. ಗುರುತಿನ ಚೀಟಿ ಕೇಳಿದಾಗ, ನಾನು ಮೊಳಕಾಲ್ಮೂರು ಶಾಸಕ ಯಾಕ್ರೀ ನಿಮಗೆ ಐಡಿ, ಐಡಿ ಕಾರಿನ ಬಳಿ ಇದೆ ಎಂದು ಜೋರಾಗಿಯೇ ಹೇಳಿದ್ದಾರೆ. ನಂಬಿದ ಮಾರ್ಷಲ್ಗಳು ಕರಿಯಪ್ಪನಿಗೆ ಒಳಗೆ ಪ್ರವೇಶಿಸಲು ಅವಕಾಶ ಕೊಟ್ಟಿದ್ದಾರೆ. ಕೈಯಲ್ಲಿ ಒಂದು ಬ್ಯಾಗ್ ಕೂಡ ತಂದಿದ್ದ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.