ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಾಂಗ್ರೆಸ್ ನಾಯಕರಿಂದ ಮೌನ ಪ್ರತಿಭಟನೆ | JANATA NEWS
ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಕೇಂದ್ರ ಸರ್ಕಾರ ಪಿತೂರಿ ರೂಪಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಮೌನ ಪ್ರತಿಭಟನೆ ನಡೆಸಿತು.
ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸೇರಿದಂತೆ ಸಚಿವರು ಹಾಗೂ ಶಾಸಕರು ಪಾಲ್ಗೊಂಡರು.
ಪ್ರತಿಭಟನೆಯ ವೇಳೆ ಸಿಎಂ ಸಿದ್ದರಾಮಯ್ಯ ಮೊಳಗಲಿ ಮೊಳಗಲಿ ಸತ್ಯದ ಘರ್ಜನೆ ಮೊಳಗಲಿ ಎಂದು ಬರೆದಿರುವ ಹಾಗೂ ರಾಹುಲ್ ಗಾಂಧಿ ಫೋಟೋ ಇರುವ ಭಿತ್ತಿ ಫಲಕವನ್ನು ಪ್ರದರ್ಶಿಸಿದರು.
ರಾಹುಲ್ ಗಾಂಧಿ ಸಂಸತ್ ಸ್ಥಾನ ಅನರ್ಹತೆಯನ್ನು ಕೋರ್ಟ್ ಎತ್ತಿ ಹಿಡಿದಿದ್ದು, ರಾಗಾ ಹಿನ್ನಡೆಯನ್ನು ಖಂಡಿಸಿ ಕಾಂಗ್ರೆಸ್ ಈ ಪ್ರತಿಭಟನೆಯನ್ನು ಕೈಗೊಂಡಿದೆ. ರಾಹುಲ್ ಗಾಂಧಿಯ ಸತ್ಯದ ನುಡಿಗಳನ್ನು ಸಹಿಸಿಕೊಳ್ಳದ ಪ್ರಧಾನ ಮಂತ್ರಿಗಳು ಅವರ ಮೇಲೆ ಎಲ್ಲಾ ಸೇಡಿನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹತೆಯನ್ನು ಇಡೀ ರಾಷ್ಟ್ರವೇ ಖಂಡಿಸುತ್ತಿದೆ. ಬಿಜೆಪಿಯ ದ್ವೇಷ ರಾಜಕಾರಣವನ್ನು ಖಂಡಿಸಿ ಈ ಪ್ರತಿಭಟನೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
ಅನರ್ಹತೆಯನ್ನು ಪ್ರಶ್ನಿಸಿ ಸೂರತ್ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಇದಾದ ಬಳಿಕ ರಾಹುಲ್, ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಜುಲೈ 7ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ ಸೂರತ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಲು ರಾಹುಲ್ ಗಾಂಧಿ ನಿರ್ಧಾರ ಮಾಡಿದ್ದಾರೆ.