ಬೆಂಗಳೂರಿನಲ್ಲಿ ಮಹಾಘಟಬಂಧನ್ ಸಭೆ, ವಿಪಕ್ಷಗಳ ಶಕ್ತಿಪ್ರದರ್ಶನ! | JANATA NEWS
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತತ್ವದಲ್ಲಿ 'ನಾವೆಲ್ಲ ಒಂದಾಗಿ ನಿಲ್ಲುತ್ತೇವೆ' ಎಂಬ ಘೋಷವಾಕ್ಯದಡಿ ಬೆಂಗಳೂರಿನಲ್ಲಿ ನಡೆದಿರುವ ವಿಪಕ್ಷಗಳ ಮಹಾಘಟಬಂಧನ್ ಸಭೆ ಮಂಗಳವಾರ ಮಹತ್ವದ ನಿರ್ಣಯ ಕೈಗೊಳ್ಳಲಿದೆ.
ಈ ಸಭೆಯಲ್ಲಿ 26 ಪಕ್ಷಗಳು ಭಾಗಿಯಾಗಲಿವೆ. ಈ ಸಭೆ ವಿಪಕ್ಷಗಳಿಗೆ ಗೇಮ್ ಚೇಂಜರ್ ಆಗಿದೆ. ಯುನಿಟೆಡ್ ವಿ ಸ್ಟ್ಯಾಂಡ್ ಘೋಷವಾಕ್ಯದಡಿ ಸಮಾಲೋಚನೆ ನಡೆಸಲಾಗುತ್ತಿದೆ. ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳು ಈಗಾಗಲೇ ಮೊದಲ ಸಭೆಯನ್ನು ನಡೆಸಿವೆ. ಇಂದಿನ ಎರಡನೇ ಸಭೆಯಲ್ಲಿ ಮಹಾಮೈತ್ರಿ ಬಗ್ಗೆ ಮಹತ್ವದ ನಿರ್ಣಯಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಸೋಮವಾರ ಮಧ್ಯಾಹ್ನ 23 ಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲರನ್ನೂ ಆದರದಿಂದ ಬರಮಾಡಿಕೊಂಡರು.
ಈ 26 ಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರು ನಾಮಕರಣ ಮಾಡುವ ಸಾಧ್ಯತೆ ಇದೆ. ಮಿತ್ರಪಕ್ಷಗಳ ದಂಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ರಣತಂತ್ರ ರೂಪಿಸಲಿದೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ಮಹಾಘಟಬಂಧನ್ ಸಭೆ ನಡೆಯಲಿದೆ.
ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಮೈತ್ರಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸೀಟು ಹಂಚಿಕೆ ವಿಚಾರಗಳು, ಚುನಾವಣಾ ಪ್ರಚಾರಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಗುತ್ತಿದೆ.
ಬಿಹಾರದ ರಾಜಧನಿ ಪಾಟ್ನಾದಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ಮೊದಲ ಸುತ್ತಿನ ವಿಪಕ್ಷಗಳ ಸಭೆ ನಡೆದಿತ್ತು. ಆಗ 16 ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸದ್ದವು. ಈ ಬಾರಿ ಹೊಸದಾಗಿ 8 ಪಕ್ಷಗಳು ಬೆಂಬಲ ಸೂಚಿಸಿದ್ದು 24 ಪಕ್ಷಗಳು ಭಾಗವಹಿಸುತ್ತಿವೆ. ಈ ಬಾರಿ ಸಭೆಯ ಉಸ್ತುವಾರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ವಹಿಸಲಾಗಿದೆ. 7 ರಾಜ್ಯಗಳ ಮುಖ್ಯಮಂತ್ರಿಗಳು ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.