ಬ್ರೈನ್ ಮ್ಯಾಪಿಂಗ್: ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳಿಯ ಅಸಲಿಯತ್ತು ಬಯಲು | JANATA NEWS
ಬೆಂಗಳೂರು : ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮೂಲಕ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿತೆ ಅನ್ನಪೂರ್ಣಳನ್ನು ಬಂಧಿಸಲಾಗಿದೆ.
ಗದಗ ಜಿಲ್ಲೆಯ ಜನತಾ ಕಾಲೋನಿಯ ನಿವಾಸಿ ಅನ್ನಪೂರ್ಣ ಬಂಧಿತ ಆರೋಪಿ. ಈಕೆ ಮಹಾಲಕ್ಷ್ಮೀ ಲೇಔಟನ ಉದ್ಯಮಿ ಹೊನ್ನಾಚಾರಿ ಎಂಬುವರ ಮನೆಯಲ್ಲಿ 2021 ರಿಂದ 2022 ಜನವರಿಗೂ ಕೆಲಸ ಮಾಡಿದ್ದಳು. ಹಂತ-ಹಂತವಾಗಿ 10 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಕೆಲಸದಾಕೆ ಮೇಲೆ ಅನುಮಾನಗೊಂಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.
ತನಿಖೆ ನಡೆಸಿ ನಾಲ್ಕು ಬಾರಿ ನೊಟೀಸ್ ಕೊಟ್ಟು ವಿಚಾರಣೆ ನಡೆಸಿದರೂ ಸಹ ಚಿನ್ನ ಕದ್ದಿಲ್ಲ ಎಂದು ಪೊಲೀಸರ ಮುಂದೆ ಮಹಿಳೆ ಸುಳ್ಳು ಹೇಳಿದ್ದಳು.
ಪ್ರಕರಣ ಭೇದಿಸಲು ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಅನ್ನಪೂರ್ಣಳ ಒಪ್ಪಿಗೆ ಪಡೆದೇ ಆಕೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು.
ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಮಾಮಾ ಮಾಮ ಎಂದಷ್ಟೇ ಮಹಿಳೆ ಉತ್ತರಿಸಿದ್ದಳು. ಪರೀಕ್ಷೆ ವೇಳೆ ದೊರೆತ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು ಮತ್ತೆ ವಿಚಾರಣೆಗೊಳಪಡಿಸಿದಾಗ ಉದ್ಯಮಿ ಮನೆಯಲ್ಲಿ ಕದ್ದಿದ್ದ ಆಭರಣವನ್ನ ಗದಗದಲ್ಲಿರುವ ತನ್ನ ಮಾಮಾನಿಗೆ ಕೊಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಸದ್ಯ ಮಹಿಳೆಯ ಊರಿನಲ್ಲಿರುವ ಸಂಬಂಧಿ ಮಾವನಿಂದ ಹಾಗೂ ಗಿರವಿ ಅಂಗಡಿಗಳಲ್ಲಿ ಇಟ್ಟಿದ್ದ 100 ಗ್ರಾಂ ಹೆಚ್ಚಿನ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.