ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರು, ಚಾಲಕನ ಸಾವು | JANATA NEWS
ಮಂಡ್ಯ : ಮಂಡ್ಯ ತಾಲೂಕಿನ ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಬ್ಬನಹಳ್ಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದು, ಚಾಲಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮಂಡ್ಯದ ಶಿವಳ್ಳಿ ಗ್ರಾಮದ ಲೋಕೇಶ್ ಎಂಬಾತ ನಿನ್ನೆ ಮೈಸೂರಿಗೆ ಹೋಗಬೇಕು ಎಂದು ಸ್ನೇಹಿತ ಮೋಹನ್ ಬಳಿ ಕಾರು ತೆಗೆದುಕೊಂಡು ಹೋಗಿದ್ದ. ಇದೀಗ ಕಾರು ವಾಪಾಸ್ ಕೊಡಲು ಶಿವಳ್ಳಿಯಿಂದ ತಿಬ್ಬನಹಳ್ಳಿಗೆ ಹೋಗುವಾಗ ಈ ಘಟನೆ ನಡೆದಿದೆ.
ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ಕಾಲುವೆಗೆ ಕಾರು ಬಿದ್ದಿದೆ. ಕಾರು ಚಲಿಸುತ್ತಿದ್ದ ಚಾಲಕ ಲೋಕೇಶ್ ನಾಪತ್ತೆಯಾಗಿದ್ದಾರೆ. ಕಾಲುವೆಯಲ್ಲಿ ಹೆಚ್ಚು ನೀರು ಇರುವ ಕಾರಣ ಕಾರು ಮುಳುಗಿದೆ. ಇದೀಗ ಕಾರನ್ನು ಮೇಲಕ್ಕೆತ್ತಲಾಗಿದ್ದು, ನಾಪತ್ತೆಯಾಗಿರುವ ಲೋಕೇಶ್ಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೈಸೂರು ಸಾಮ್ರಾಜ್ಯದ ನಾಲ್ವಡಿ ಕೃಷ್ಣರಾಜ ಒಡೆಯಲು ನೀರಾವರಿ ಯೋಜನೆಗಾಗಿ ಕೃಷ್ಣರಾಜ ಸಾಗರ ಆಣೆಕಟ್ಟು ನಿರ್ಮಿಸಿ ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಆದರೆ, ಮಹಾರಾಜರ ಕಾಲದಲ್ಲಿ ನಿರ್ಮಿಸಲಾದ ಕಾಲುವೆಗಳಿಗೆ ಸರ್ಕಾರ 75 ವರ್ಷಗಳಾದರೂ ಸೂಕ್ತ ತಡೆಗೋಡೆಗಳನ್ನು ನಿರ್ಮಿಸಿಲ್ಲ. ನಾಲೆಯ ಬದಿಯಲ್ಲಿ ರಸ್ತೆಗಳನ್ನು ನಿರ್ಮಿಸಿ ತಡೆಗೋಡೆ ನಿರ್ಮಿಸದೇ ಸರ್ಕಾರ ನಿರ್ಲಕ್ಷ್ಯ ಮಾಡಿದ್ದರಿಂದ ಆಗಿಂದಾಗ್ಗೆ ನಾಲೆಗೆ ಬಸ್, ಕಾರು ಹಾಗೂ ಇತರೆ ವಾಹನಗಳು ಉರುಳಿಬಿದ್ದು, ಸಾವಿನ ಘಟನೆಗಳು ವರದಿ ಆಗುತ್ತಿವೆ.