ವಿಪಕ್ಷ ನಾಯಕ ಆಯ್ಕೆ ವಿಳಂಬ, ಬಿಜೆಪಿಯವರು ವಿಪಕ್ಷ ನಾಯಕನನ್ನು ನೇಮಿಸದಿರುವುದು ದುರಂತ: ಲಕ್ಷ್ಮಣ್ ಸವದಿ | JANATA NEWS
ಬೆಳಗಾವಿ : ರಾಷ್ಟ್ರೀಯ ಪಕ್ಷ ಬಿಜೆಪಿಗೆ ಅಧಿವೇಶನ ಮುಗಿದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತಿಲ್ಲ. ಇದು ಬಿಜೆಪಿಯ ದುರಂತದ ಕತೆ ಎಂದು ಅಥಣಿ ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಸವದಿ, ಬಿಜೆಪಿ ಪಕ್ಷಕ್ಕೆ ಯಾರು ರಾಜ್ಯಾಧ್ಯಕ್ಷ ಆಗುತ್ತಾರೆ ಎನ್ನುವುದರ ಅವಶ್ಯಕತೆ ನಮಗಿಲ್ಲ. ಆದರೆ, ದುರ್ದೈವದ ಸಂಗತಿ ಎಂದರೆ, ರಾಷ್ಟ್ರೀಯ ಪಕ್ಷ ಬಿಜೆಪಿಗೆ ಅಧಿವೇಶನ ಮುಗಿದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತಿಲ್ಲ. ಇಂತಹದೊಂದು ಬೆಳವಣಿಗೆ ನಡೆದಿರುವುದು ಇತಾಹಸದಲ್ಲೇ ಇದೇ ಮೊದಲು. ಇಂತಹ ಇತಿಹಾಸವನ್ನು ಸೃಷ್ಟಿಸಲು ಬಿಜೆಪಿಯವರಿಂದ ಮಾತ್ರ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಬಿಜೆಪಿ ಹೊಸ ಹೊಸ ಇತಿಹಾಸ ಬರೆಯುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಹೊಸ ಸರ್ಕಾರ ರಚನೆಯಾದ ಮೇಲೆ ಶಾಸಕರು ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಬಳಿ ತಿಳಿಸುವುದು ವಾಡಿಕೆ. ರಾಹುಲ್ ಗಾಂಧಿ ಹಿರಿಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದ ಕಾರಣ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿತ್ತು. ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನವಿಲ್ಲ. ವಿರೋಧ ಪಕ್ಷ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಮುಂಬರುವ ಲೋಕಸಭಾ ಚುನಾವಣಾ ಟಾಸ್ಕ್ ನೀಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಟಾಸ್ಕ್ ಅಲ್ಲ. ಪಕ್ಷ ನೀಡಿರುವ ಜವಾಬ್ದಾರಿ. ಸಮರ್ಥವಾಗಿ ನಿಭಾಯಿಸುತ್ತೇವೆ. ಆಗಸ್ಟ್ 2 ರಂದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕರೆದಿರುವ ಸಭೆಗೂ ಹೋಗುತ್ತೇವೆ. ಅಲ್ಲಿ ಕೊಡುವ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ತಿಳಿಸಿದರು.