ಸಿಎಂ ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದು, ಮೊದಲಿನ ಹಾಗೆ ಸಿಡಿದೇಳುತ್ತಿಲ್ಲ | JANATA NEWS
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದು, ಮೊದಲಿನ ಹಾಗೆ ಸಿಡಿದೇಳುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಿನ್ನೆ ದೆಹಲಿಯಲ್ಲಿ ನಡೆದ ಸಭೆಯ ಬಗ್ಗೆ ಅಭ್ಯಂತರ ಇಲ್ಲ. ಆದರೆ ಇಡೀ ಸಂಪುಟ ದೆಹಲಿಗೆ ಹೋಗಿ ಪಕ್ಷದ ಸಭೆ ನಡೆಸಿರುವುದು ರಾಜ್ಯದ ಇತಿಹಾಸದಲ್ಲಿ ನಡೆದಿರಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ರಾಜ್ಯದ ಜನತೆಗೆ ಅವಮಾನ ಮಾಡಿದಂತಾಗಿದೆ ಎಂದರು.
ಸಿದ್ದರಾಮಯ್ಯ ವರಿಷ್ಠರ ಬಳಿ ತಲೆ ಬಾಗಿರೋದು ಬಹಳ ವಿರಳ. ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ. ಸಿದ್ದರಾಮಯ್ಯ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳ್ತಿಲ್ಲ. ಇವಾಗ ವರಿಷ್ಠರ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ಮೊದಲನೇ ಅವಧಿಯ ಸಿಎಂ ಸಿದ್ದರಾಮಯ್ಯಗೂ ಎರಡನೇ ಅವಧಿಯ ಸಿಎಂ ಸಿದ್ದರಾಮಯ್ಯಗೂ ಸಾಕಷ್ಟು ವ್ಯತ್ಯಾಸ ಇದೆ. ಈಗಿನ ಸಿಎಂ ಸಿದ್ದರಾಮಯ್ಯಗೆ ಆಡಳಿತದ ಮೇಲಿನ ಹಿಡಿತ ತಪ್ಪಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸರ್ಕಾರದ ಆರಂಭದಲ್ಲಿಯೇ ಇಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಶಾಸಕಾಂಗ ಸಭೆಯಲ್ಲಿಯೂ ಶಾಸಕರು ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟಿಲ್ಲ. ವರ್ಗಾವಣೆ ಮಾಡುವ ದಂಧೆ, ಸ್ವಜನ ಪಕ್ಷಪಾತ ಅವ್ಯಾಹತವಾಗಿ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲದ ಸಂದರ್ಭದಲ್ಲಿ ಪ್ರವಾಹ, ಬರ ಇರುವ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತ ವೈಫಲ್ಯತೆ ಕಾಣಿಸುತ್ತಿದೆ ಎಂದು ಹರಿಹಾಯ್ದರು.