ಕಾಂಗ್ರೆಸ್ ಪಕ್ಷದ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ | JANATA NEWS
ಬೆಂಗಳೂರು : ಕಾಂಗ್ರೆಸ್ ಪಕ್ಷದ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುವ ವಿಚಾರವಾಗಿ ತಿರುಗೇಟು ನೀಡಿದ ಕುಮಾರಸ್ವಾಮಿ ಅವರು, ನನ್ನ ಪಕ್ಷದ ಶಾಸಕರು ನನ್ನ ತಿಳುವಳಿಕೆ ಇರುವ ರೀತಿಯಲ್ಲಿ ಪಕ್ಷ ಬಿಡುವ ಸಾಧ್ಯತೆ ಇಲ್ಲ. ಕಾಂಗ್ರೆಸ್ ನವರು ಯಾಕೆ ಈ ರೀತಿಯ ಚರ್ಚೆ ಹುಟ್ಟುಹಾಕಿದ್ದಾರೆ ಎಂದರೇ, ಕಾಂಗ್ರೆಸ್ನ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ. ಬಿಜೆಪಿ, ಜೆಡಿಎಸ್ನಿಂದ ಬರ್ತಾ ಇದ್ದಾರೆ ಅಂತ ಹೇಳ್ತಾ ಇದ್ದಾರೆ. ಕಾಂಗ್ರೆಸ್ ಶಾಸಕರು ಪಕ್ಷ ಬಿಡುವುದನ್ನ ತಡೆಯಲು ಈ ಗುಮ್ಮ ಬಿಟ್ಟು ಕೊಂಡ ಹೋಗುತ್ತಿದ್ದಾರೆ ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ ಟ್ವೀಟ್ ವಿಚಾರ ಇಟ್ಟುಕೊಂಡು ಮಾತನಾಡಿದ್ದ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಟ್ವೀಟ್ನಲ್ಲಿ ನೀರು ಬಿಡಿ ಅಂತ ಹೇಳಿಲ್ಲ. ನನ್ನ ಟ್ವೀಟ್ನಲ್ಲಿ ಅಣ್ಣ-ತಮ್ಮಂದಿರ ರೀತಿ ಇರಬೇಕು ಅಂತ ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಪರಿಹಾರ ಸಿಗಲ್ಲ. ಹೀಗಾಗಿ ಕೊಟ್ಟು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ತಮಿಳುನಾಡು ರೈತರಿಗೆ ನಮ್ಮ ರೈತರು ಅನ್ಯಾಯ ಮಾಡಿಲ್ಲ. ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದೇನೆ. ಇದನ್ನು ಹೇಳಿದ್ದು ತಪ್ಪಾ? ನಾನು ನೀರು ಬಿಡುತ್ತೇನೆ ಎಂದು ಹೇಳಿರಲಿಲ್ಲ ಎಂದು ತಿರುಗೇಟು ನೀಡಿದರು.
ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡುತ್ತಿರಾ? ಉಡಾಫೆ ರಾಜಕೀಯ ಮಾಡಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಾ. ಮಾತ್ತೆತ್ತಿದರೆ ಪೆನ್ನು ಕೊಡಿ ಪೆನ್ನು ಕೊಡಿ ಎಂದು ಕೇಳುತ್ತಿದ್ದರು. ನಮ್ಮ ರಾಜ್ಯ ಹಾಳು ಮಾಡಲು ಪೆನ್ನು ಕೇಳಿದ್ರಾ? ನಮ್ಮ ರೈತರನ್ನು ಕಡೆಗಣಿಸಿ ಬೇರೆ ಯಾರನ್ನೋ ಮೆಚ್ಚಿಸೋಕೆ ಪೆನ್ನು ಕೇಳಿದ್ರಾ? ಹುಡುಗಾಟ ಆಡಬೇಡಿ. ಉತ್ತರ ಕೊಡುವಾಗ ನೀರಾವರಿ ಸಚಿವರ ಸ್ಥಾನ ಗಾಂಭೀರ್ಯತೆಯನ್ನು ಕಾಪಾಡಿಕೊಳ್ಳಿ. ಬಿಚ್ಚೋದು ಬಿಚ್ಚೋದು ಎಂದು ಮಾತನಾಡಬೇಡಿ. ನೀವು ಮಾಡಿರುವ ಅವ್ಯವಹಾರಗಳು ಸಾಕಷ್ಟು ಇವೆ. ಜಗಜ್ಜಾಹೀರಾಗಿವೆ. ಹಿಂದೆ ಏನೋ ಮಾಡಿಕೊಂಡು ಆಯ್ತು. ಈಗಲಾದರೂ ಗೌರವಯುತವಾಗಿ ಕೆಲಸ ಮಾಡಿ ಎಂದು ಹರಿಹಾಯ್ದರು.
ಹಿಂದೆ ಮಾಡಿಕೊಂಡಿದ್ದು ಸಾಕು. ಇನ್ನಾದರು ಲೂಟಿ ಹೊಡೆಯವುದು ನಿಲ್ಲಿಸಿ. ಅಣ್ಣ ಅಂತಿರಲ್ಲ, ಇಲ್ಲಿಯವರೆಗೆ ಲೂಟಿ ಮಾಡಿರುವುದು ಸಾಕು. ನನ್ನ ಮಾತನ್ನ ಕೇಳಿ ಲೂಟಿ ಹೊಡೆಯೊದನ್ನ ನಿಲ್ಲಿಸಿ. ಸಲಹೆ ಒಪ್ಪಿಕೊಂಡ್ರೆ ಆಗ ತಮ್ಮ ಅಂತ ಒಪ್ಪಿಕೊಳ್ಳುತ್ತೇನೆ ಎಂದರು.