ಮನೆಯಲ್ಲಿದ್ದವರ ಕೈಕಾಲು ಕಟ್ಟಿ ದರೋಡೆ ಮಾಡಿದ್ದ ಗ್ಯಾಂಗ್ ಅರೆಸ್ಟ್ | JANATA NEWS
ಬೆಂಗಳೂರು : ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದವರ ಕೈಕಾಲು ಕಟ್ಟಿಹಾಕಿ ದರೋಡೆ ನಡೆಸುತ್ತಿದ್ದ ಗ್ಯಾಂಗ್ ನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎನ್ ಸತೀಶ್ ಕುಮಾರ್, ಮಣಿಕಂಠನ್, ಸತೀಶ್, ಅಯ್ಯನಾರ್, ಕಿರಣ್, ಸತೀಶ್ ಅಲಿಯಾಸ್ ಮಟನ್ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ತಮಿಳುನಾಡಿನ ಹೊಸೂರು ಮೂಲದದವರಾಗಿದ್ದಾರೆ.
ಬಂಧಿತರು ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮನೆಯಲ್ಲಿ ಜನರಿದ್ದ ವೇಳೆಯೇ ತೆರಳಿ ಕೈಕಾಲು ಕಟ್ಟಿ ದರೋಡೆ ಮಾಡುತ್ತಿದ್ದರು.
ಅತ್ತಿಬೆಲೆಯ ಕುಮಾರ್ ಲೇಔಟ್ನಲ್ಲಿ ಕಳೆದ ವರ್ಷ ನವೆಂಬರ್ 28 ರಂದು ಎಲ್ಐಸಿ ಏಜೆಂಟ್ ಆಗಿದ್ದ ದೇವರಾಜೇಗೌಡ ಅವರ ಮನೆಯಲ್ಲಿ ದರೋಡೆ ನಡೆಸಲಾಗಿತ್ತು. ಎಲ್ಐಸಿ ಪಾಲಿಸಿ ಮಾಡಿಸಬೇಕೆಂದು ಮನೆಗೆ ಎರಡು ಮೂರು ಬಾರಿ ಬಂದು ಹೋಗಿದ್ದ ಅಸಾಮಿಗಳು, ನಂತರ ಮನೆಯಲ್ಲಿ ದೇವರಾಜೇಗೌಡ ಹಾಗೂ ಪತ್ನಿ ಮಂಜುಳ ಮನೆಯಲ್ಲಿದ್ದಾಗ ಮಾರಕಾಸ್ತ್ರಗಳನ್ನ ತೋರಿಸಿ ಕೈಕಾಲು, ಬಾಯಿಗೆ ಸೆಲೋ ಟೇಪ್ ಹಾಕಿ ಸುಮಾರು 12,50,000 ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನ ದರೋಡೆ ನಡೆಸಿದ್ದರು.
ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.