ಕಾವೇರಿ ನದಿ ವಿವಾದ ತೀವ್ರ ಸ್ವರೂಪ : ಕರ್ನಾಟಕದಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು, ನಾಳೆ ಮಂಡ್ಯ ಬಂದ್ | JANATA NEWS
ಬೆಂಗಳೂರು : ಕಾವೇರಿ ನದಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಕರ್ನಾಟಕದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಿದ ಸಿಡಬ್ಲ್ಯೂಎಂಎ ಮತ್ತು ಸಿಡಬ್ಲ್ಯೂಆರ್ಸಿ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಗುರುವಾರ ಕಾವೇರಿ ಹೃದಯಭಾಗವಾದ ಮಂಡ್ಯ ಮತ್ತು ಮೈಸೂರಿನಿಂದ ಆರಂಭಗೊಂಡು, ಬೆಂಗಳೂರು ಕೂಡ ತೀವ್ರ ಪ್ರತಿಭಟನೆಗೆ ಸಾಕ್ಷಿಯಾಯಿತು.
ರೈತ ಹಿತರಕ್ಷಣಾ ಸಮಿತಿ ಸೆಪ್ಟೆಂಬರ್ 23 ಶನಿವಾರ ಮಂಡ್ಯ ಬಂದ್ಗೆ ಕರೆ ನೀಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ರೈತರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಬೀದಿಗಿಳಿದಿದ್ದರು.
ಪ್ರತಿಭಟನಾಕಾರರು ಪ್ರಮುಖ ಜಂಕ್ಷನ್ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿದರು. ಇನ್ನೂ, ಮಂಡ್ಯದಲ್ಲಿ ರೈತರು ನದಿ ನೀರಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.
ನೀರು ಬಿಡುವಂತೆ ಕರ್ನಾಟಕಕ್ಕೆ ನೀಡಿರುವ ನಿರ್ದೇಶನ ಅವೈಜ್ಞಾನಿಕವಾಗಿದ್ದು, ನೀರು ಬಿಟ್ಟರೆ ಕಾವೇರಿ ಜಲಾನಯನ ಪ್ರದೇಶದ ಮೈಸೂರು, ಮಂಡ್ಯ, ಬೆಂಗಳೂರು ಮತ್ತಿತರ ಜಿಲ್ಲೆಗಳ ದಾಹ ನೀಗಿಸಲು ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ನೆರೆ ರಾಜ್ಯಕ್ಕೆ ನೀರು ಬಿಡದಂತೆ ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿ ಹಾಗೂ ಮೈಸೂರು ಕಾರ್ಖಾನೆ ಅಚ್ಚುಕಟ್ಟು ಕಬ್ಬು ಬೆಳೆಗಾರರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.