ಕರ್ನಾಟಕದ ಮೂವರು ನಾಯಕರಿಗೆ ನಾಳೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ | JANATA NEWS
ಬೆಂಗಳೂರು : ನಾಳೆ ದೆಹಲಿಗೆ ಬರುವಂತೆ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ.
ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿಸಿ ಮೋಹನ್ಗೆ ಬಿಜೆಪಿ ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಇದರಂತೆ ಈ ಮೂವರು ನಾಯಕರು ಗುರುವಾರವೇ ದೆಹಲಿಗೆ ತೆರಳಬೇಕಿದೆ ಎನ್ನಲಾಗಿದೆ.
ನಾಳೆ ದೆಹಲಿಗೆ ಬಂದು ಮಧ್ಯಾಹ್ನ 3.30ಕ್ಕೆ ತಮ್ಮನ್ನು ಕಾಣುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಮೂವರು ನಾಯಕರು ನಾಳೆ ದೆಹಲಿಗೆ ಬಿಜೆಪಿ ಹೈಕಮಾಂಡ್ ಭೇಟಿ ಮಾಡೋದಕ್ಕೆ ತೆರಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಭೇಟಿ ಮಾಡದೆ ವಾಪಸ್ ಕಳುಹಿಸಿತ್ತು.
ಈ ಮಧ್ಯೆ, ಹೈಕಮಾಂಡ್ನಿಂದ ಕರೆ ಬಂದಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರಿಗೂ ಬರಲು ಹೇಳಿದ್ದಾರೆ. ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಆಯ್ಕೆ ಮಾಡದ ವಿಚಾರವಾಗಿ ಹೈಕಮಾಂಡ್ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಅಲ್ಲಿ ನಮಗಿಂತ ತಿಳಿದವರು, ಪಕ್ಷಕ್ಕಾಗಿ ದುಡಿದವರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ. ಯಾಕೆ ತಡ ಮಾಡಿದ್ದಾರೆ ಎಂಬುದಕ್ಕೆ ಒಂದು ಕಾರಣ ಇರಬಹುದು. ಆ ಕಾರಣ ಏನು ಎಂದು ತಿಳಿಯುವ ಅಗತ್ಯ ನನಗಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಈಗ ಮೂವರು ಬಿಜೆಪಿ ನಾಯಕರನ್ನು ನಾಳೆ ದೆಹಲಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಹೈಕಮಾಂಡ್ ಸೂಚಿಸಿರೋದು ತೀವ್ರ ಕುತೂಹಲ ಮೂಡಿಸಿದೆ.