ಪಠ್ಯ ಕ್ರಮದಲ್ಲಿ ವೇದ ಉಪನಿಷತ್ ಅಳವಡಿಕೆ ಅಗತ್ಯ: ಬ್ರಹ್ಮಾನಂದ ಸ್ವಾಮೀಜಿ | Janata news
ಕಾರವಾರ : ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ನೀಡುವ ಶಿಕ್ಷಣ ಕ್ರಮದಲ್ಲಿಯೇ ವೇದ, ಉಪನಿಷತ್, ಶಾಸ್ತ್ರ ಹಾಗೂ ಪ್ರಸ್ತಾನ ತ್ರಯಗಳನ್ನು ಅಳವಡಿಸಿ ಸನಾತನ ಭಾರತದ ಪರಂಪರೆಯನ್ನು ಉಳಿಸುವ ಮೂಲಕ ನಮ್ಮ ಯುವಜನಾಂಗವನ್ನು ಶಕ್ತಿಯುತ, ಸಂಸ್ಕಾರಯುತ ಪ್ರಜೆಗಳನ್ನಾಗಿ ರೂಪಿಸಿ ಈ ದೇಶವನ್ನು ವಿಶ್ವಗುರುವಾಗಿ ಮಾರ್ಪಾಡಿಸಬಹುದು ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಹೇಳಿದರು.
ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ಪ್ರಸ್ತುತ ಶಾಲಾ ಕಾಲೇಜುಗಳ ಪಠ್ಯಗಳಲ್ಲಿರುವ ಮೊಗಲರ ಚರಿತ್ರೆ, ಬ್ರಿಟಿಷರ ಚರಿತ್ರೆ, ಚೈನಾ, ರಷ್ಯಾ, ಫ್ರಾನ್ಸ್ ಇವುಗಳ ಕ್ರಾಂತಿಗಳ ಅಧ್ಯಯನದಿಂದ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಿಲ್ಲ. ಬದಲಾಗಿ ಪಠ್ಯಕ್ರಮಗಳಲ್ಲಿ ಭವ್ಯ ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತವನ್ನು ಅಳವಡಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಒಟ್ಟಾಗಿ ಕುಳಿತು ಚರ್ಚಿಸಿ ದೇಶದ ಸಾಧು, ಸಂತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ಧರ್ಮ, ಸಂಸ್ಕಾರದಿಂದ ವಂಚಿತರಾಗಿ ಆಧುನೀಕರಣದ ಮೋಹಕ್ಕೆ ಬಲಿಯಾಗುವ ಸಾಧ್ಯತೆಗಳಿದೆ. ಇದಕ್ಕೆ ಈ ನೆಲದ ನಾಗರೀಕರು ನಿಷ್ಪಕ್ಷಪಾತದಿಂದ ಚಿಂತನೆ ನಡೆಸಬೇಕಿದೆ.
ದೇಶದ ಶ್ರೇಷ್ಠ ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಸಮಗ್ರ ಯುವ ಪೀಳಿಗೆಯನ್ನು ಸಂಸ್ಕಾರವಂತರಾಗಿ ಮಾಡುವ ಉದ್ದೇಶದಿಂದ ಸರ್ಕಾರವು ಮುಂದಿನ ಹತ್ತು ವರ್ಷಗಳೊಳಗೆ ಪ್ರತಿ ಹಳ್ಳಿಗಳಲ್ಲಿ ಗುರುಕುಲ ಮಾದರಿಯ ಅಂಗನವಾಡಿ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಪಟ್ಟಾಭಿಷೇಕ ಮತ್ತು ಧರ್ಮ ಸಂಸದ್:
ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಮತ್ತು ಧರ್ಮ ಸಂಸದ್ ಸೆ.3 ರಂದು ಧರ್ಮಸ್ಥಳದ ನಿತ್ಯಾನಂದನಗರದ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ನಡೆಯಲಿದೆ. ಅಂದು ಲೋಕಕಲ್ಯಾಣಾರ್ಥವಾಗಿ ದೇಶದ ಮೂಲೆಮೂಲೆಗಳಿಂದ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಸಾಧುಸಂತರನ್ನು ಕರೆಯಿಸಿ ಶ್ರೀರಾಮ ತಾರಕ ಮಂತ್ರ ಯಜ್ಞವನ್ನು ಹಾಗೂ ವಿಶ್ವಕ್ಕೆ ಕಲ್ಯಾಣವಾಗುವ ಹಿಂದು ಧರ್ಮ ಜಾಗೃತಿಗಾಗಿ ಧರ್ಮ ಸಂಸದ್ನ್ನು ಏರ್ಪಡಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಸೆ.2ರಂದು ಹಿಮಾಲಯದಿಂದ ಹಾಗೂ ಭಾರತದ ಬೇರೆ ಬೇರೆ ಭಾಗಗಳಿಂದ ಶ್ರೀರಾಮಕ್ಷೇತ್ರಕ್ಕೆ ಸಾಧು ಸಂತರು ಆಗಮಿಸಲಿದ್ದಾರೆ. ಸೆ.3ರ ಬೆಳಗ್ಗೆ 7 ಗಂಟೆಯಿಂದ ಶ್ರೀರಾಮ ತಾರಕ ಮಂತ್ರ ಯಜ್ಞ , 9 ಗಂಟೆಗೆ ಸಾಧುಸಂತರ ಶೋಭಾ ಯಾತ್ರೆ, 11 ಗಂಟೆಗೆ ಸ್ವಾಮೀಜಿಯವರ ಹತ್ತನೇ ವರ್ಷದ ಪೀಠಾರೋಹಣ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದರು.
ಸೂಚನೆ : ಮೇಲಿನ ಮಾಹಿತಿಗಳನ್ನು ನಮ್ಮ ಅನುಮೋದನೆ ಇಲ್ಲದೆ ಕಾಪಿ ಮಾಡುವುದು ಅಥವಾ ಮರುಪ್ರಕಟಣೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಬೆಂಗಳೂರು ಕೋರ್ಟನಲ್ಲಿ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು.