ಪಂಚಭೂತಗಳಲ್ಲಿ ಲೀನವಾದ ಅಜಾತಶತ್ರು ಅಟಲ್ | Janata news
ನವದೆಹಲಿ : ಇಂದು ಶುಕ್ರವಾರ ಸಂಜೆ 4:45ಗಂಟೆಗೆ ಪ್ರಪಂಚ ಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಪಂಚಭೂತಗಳಲ್ಲಿ ಲೀನವಾದರು. ಮನುಷ್ಯ ಒಬ್ಬನ ಜೀವಮಾನದಲ್ಲಿ ಗಳಿಸಬಹುದಾದ ಗರಿಷ್ಠ ಮಟ್ಟದ ಪ್ರೀತಿ, ವಿಶ್ವಾಸ, ಗೌರವ ಗಳಿಸಿದ್ದ ಅಟಲ್ ಅವರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಬ್ರಹತ್ ಮೆರವಣಿಗೆಯೊಂದಿಗೆ ರಾಷ್ಟೀಯ ಸ್ಮೃತಿ ಸ್ಥಳಕ್ಕೆ ಸಂಜೆ ಅಷ್ಟೊತ್ತಿಗೆ ತರಲಾಯಿತು. ದಾರಿಯುದ್ದಕ್ಕೂ ಲಕ್ಷಾಂತರ ದೇಶವಾಸಿಗಳು ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿದರು.
ಕಾಲುನಡಿಗೆಯಲ್ಲಿ ಪಾರ್ಥಿವ ಶರೀರ ಹಿಂಬಾಲಿಸಿದ ಪ್ರಧಾನಿ ಮೋದಿ
ಬೃಹ್ಮಚಾರಿಯಾಗಿದ್ದ ಅಟಲ್ ಅವರ ದೊಡ್ಡ ಕುಟುಂಬವೆಂಬಂತೆ, 9 ಕಿ.ಮಿ.ಗಳಷ್ಟು ದೂರದ ರಾಷ್ಟೀಯ ಸ್ಮೃತಿ ಸ್ಥಳಕ್ಕೆ ಕಾಲು ನಡಿಗೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರದ್ಯಕ್ಷ ಅಮೀತ್ ಷಾ ಸೇರಿದಂತೆ ಬಿಜೆಪಿಯ ಮುಖ್ಯಮಂತ್ರಿಗಳು, ಅನೇಕ ಕೇಂದ್ರ ಮಂತ್ರಿಗಳು, ಗಣ್ಯರು ಅಗಲಿದ ಮಹಾ ನಾಯಕನ ಪಾರ್ಥಿವ ಶರೀರವನ್ನು ಹಿಂಬಾಲಿಸಿ ಗೌರವ ಸೂಚಿಸಿದ್ದು ವಿಶೇಷ ಎನಿಸಿತು. ರಾಷ್ಟೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳ ನಂತರ ರಾಷ್ಟ್ರಪತಿ ರಾಮನಾಥ ಕೊವಿಂದ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಸುಮಿತ್ರ ಮಹಾಜನ್, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಕೊನೆಯ ನಮನ ಸಲ್ಲಿಸಿದರು. ಹೊರರಾಷ್ಟ್ರಗಳಾದ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ಚುಕ್, ಅಪ್ಘಾನಿಸ್ಥಾನದ ಮಾಜಿ ಅಧ್ಯಕ್ಷ ಹಮಿದ್ ಕರ್ಜಾಯಿ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು.
ದತ್ತು ಪುತ್ರಿ ನಮಿತಾಯಿಂದ ಚಿತೆಗೆ ಅಗ್ನಿಸ್ಪರ್ಶ
ಅಟಲ್ ಅವರ ದತ್ತು ಪುತ್ರಿ ನಮಿತಾ ಯಿಂದ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಜಾತಶತ್ರು ಅವರ ಅಂತ್ಯಕ್ರಿಯೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಹಿಂದೂ ಸಂಪ್ರದಾಯದಲ್ಲಿ ಗಂಡುಮಕ್ಕಳಿಗೆ ಮಾತ್ರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಅಧಿಕಾರವಿದ್ದು, ಅಟಲ್ ಅವರ ದತ್ತುಪುತ್ರಿ ನಮಿತಾ ಅಟಲ್ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ದೇಶಾದ್ಯಂತ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ.