ನಾನು ಕೂಡ ನಗರದ ನಕ್ಸಲ್ ಎಂದು ಹೇಳಿಕೊಂಡ ಕಾರ್ನಾಡ್ | Janata news
ಬೆಂಗಳೂರು : ನಾನು ಕೂಡ ಅರ್ಬನ್ ನಕ್ಸಲ್ (ನಗರದ ನಕ್ಸಲ್) ಎಂದು ಜ್ಞಾನಪೀಠ ಪುರಸ್ಕೃತ ಮತ್ತು ಖ್ಯಾತ ಸಾಹಿತಿ, ನಟ ಗಿರೀಶ್ ಕಾರ್ನಾಡ್ ಸ್ವತಃ ಘೋಷಿಸಿಕೊಂಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾದರು. ಖ್ಯಾತ ವಿಚಾರವಾದಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಪುಣ್ಯತಿಥಿ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ, ಕಾರ್ನಾಡ್ ಅವರು ಅರ್ಬನ್ ನಕ್ಸಲ್ ನಾನು ಕೂಡ ಎಂಬ ಪಲಕವನ್ನು ತಮ್ಮ ಕುತ್ತಿಗೆಗೆ ನೇತು ಹಾಕಿಕೊಂಡು ಬಂದಿದ್ದರು.
ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ಗೌರಿ ದಿನದ ನಿಮಿತ್ತದ ಹಮ್ಮಿಕೊಂಡಿದ್ದ ರಾಜಭವನ ಚಲೋ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಿರೀಶ್ ಕಾರ್ನಾಡ್ ಅವರು, ತಮ್ಮ ಕುತ್ತಿಗೆಗೆ ಈ ರೀತಿಯ ಬೋರ್ಡ್ ನೇತು ಹಾಕಿಕೊಂಡು ಎಲ್ಲರ ಗಮನ ಸೆಳೆದರು.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಕೆಲವು ವಿಚಾರವಾದಿಗಳು ಮತ್ತು ಸಾಹಿತಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ ಕ್ರಮವನ್ನು ಖಂಡಿಸುವ ಉದ್ದೇಶದಿಂದ ಕಾರ್ನಾಡ್ ಅವರು ಈ ರೀತಿಯ ವಿನೂತನ ಪ್ರತಿಭಟನೆ ಮಾಡಿದ್ದಾರೆ, ಎನ್ನಲಾಗಿದೆ.