ವಾಯುಭಾರ ಕುಸಿತ : ಹವಾಮಾನ ಇಲಾಖೆಯ ಸೂಚನೆಯಿಂದ ಇಕ್ಕಟ್ಟಿನಲ್ಲಿ ಮೀನುಗಾರಿಕೆ | Janata news
ಕಾರವಾರ : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಆಳ ಸಮುದ್ರಕ್ಕೆ ಮೀನುಗಾರರು ಅ.8ರವರೆಗೆ ತೆರಳದಂತೆ ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಹವಮಾನ ವೈಪರಿತ್ಯದಿಂದ ಮೀನುಗಾರರು , ಬೋಟ್ ಮಾಲೀಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಲ ಅಗಸ್ಟನಲ್ಲಿ ತುಂಬಾ ಮಳೆಯ ಕಾರಣ ಮೀನುಗಾರಿಕೆ ಸಾಧ್ಯವಾಗಿಲ್ಲ. ಜೂನ್ ಜುಲೈನಲ್ಲಿ ಮೀನುಗಾರಿಕೆಯ ನಿಷೇಧಿತ ಅವಧಿ. ಹಾಗಾಗಿ ಸೆಪ್ಟಂಬರ್ ನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ಮತ್ಸ್ಯೋದ್ಯಮ ಇದೀಗ ಅಕ್ಟೋಬರ್ ನಲ್ಲಿ ಮತ್ತೆ ನಷ್ಟ ಅನುಭವಿಸುವಂತಾಗಿದೆ. ಅ.5 ರಿಂದ 8 ರವರೆಗೆ ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಸೂಚಿಸಿದೆ. ಮೀನುಗಾರಿಕಾ ಇಲಾಖೆ ಸಹ ಇದೇ ಎಚ್ಚರಿಕೆಯನ್ನು ಬೋಟ್ ಮಾಲೀಕರಿಗೆ ರವಾನಿಸಿದೆ. ಮತ್ಸ್ಯಬೇಟೆ ಸಮಯದಲ್ಲಿ ಕೈ ಕಟ್ಟಿ ಕುಳಿತುಕೊಳ್ಳುವ ಪ್ರಮೇಯ ಇದೀಗ ಉದ್ಬವಿಸಿದೆ.
ಅಕ್ಟೋಬರ್, ನವ್ಹೆಂಬರ್, ಡಿಸೆಂಬರ್ ನಲ್ಲಿ ಫಿಶ್ ಕ್ಯಾಚಿಂಗ್ ಜೋರಾಗಿಯೇ ಇರುತ್ತದೆ. ಆದರೆ ಈ ಸಲ ಅಕ್ಟೋಬರ್ ಮೊದಲ ವಾರ ನೈಸರ್ಗಿಕ ವಿಕೋಪದಿಂದ ಫಿಶ್ ಕ್ಯಾಚ್ ಬ್ಯಾನ್ ಆಗಿದೆ. ರಾಷ್ಟ್ರೀಯ ಹವಮಾನ ಮನ್ಸೂಚನೆ ಇಲಾಖೆಯ ಮಾಹಿತಿಯಂತೆ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಸಮುದ್ರಕ್ಕೆ ಹೋದರೆ ಮೀನುಗಾರಿಕಾ ಬೋಟ್ ಮಾಲೀಕರೆ ಅನಾಹುತಕ್ಕೆ ಹೊಣೆಯಾಗಲಿದ್ದಾರೆ. ಕಾರ್ಮಿಕರ ಜೀವ ರಕ್ಷಣೆ ಸಹ ಮುಖ್ಯ. ಮುನ್ಸೂಚನೆ ಅವಧಿಯಲ್ಲಿ ದುರಂತವಾದರೆ ಇನ್ಸುರೆನ್ಸ ಸಹ ಸಿಗುವುದಿಲ್ಲ, ಎನ್ನುವುದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ವಾದ.
ಮತ್ಸ್ಯ ಉದ್ಯಮ ನಷ್ಟ:
ಹವಮಾನ ಇಲಾಖೆಯ ಸೂಚನೆಯಿಂತೆ ಶುಕ್ರವಾರ ಸಂಜೆ ಭಾರೀ ಗಾಳಿ ಸಹಿತ ಮಳೆ ಸುರಿಯಿತು. ಶನಿವಾರ ವಾತಾವರಣ ಅಷ್ಟೇನು ಅಪಾಯ ಎನ್ನುವಂತಿರಲಿಲ್ಲ. ಆದರೆ ಹಠಾತ್ ಸಮುದ್ರದಲ್ಲಿ ಅಲೆಗಳು ಎದ್ದರೆ, ಗಾಳಿ ಬೀಸಿದರೆ ಎಂಬ ಭಯದಿಂದ ಫಿಶ್ಶಿಂಗ್ ಬೋಟ್ ಕಡಲಿಗೆ ಇಳಿದಿರಲಿಲ್ಲ. ಕೆಲವರು ಸಾಹಸ ಮಾಡಿದ ಘಟನೆಗಳಿವೆ. ಆದರೆ ಇದು ಬೋಟ್ ಮಾಲೀಕರ ರಿಸ್ಕ. ಬೋಟ್ ದುರಂತಕ್ಕೆ ತುತ್ತಾದರೆ, ಬೋಟ್ನಲ್ಲಿನ ಕಾರ್ಮಿಕ ಸಾವನ್ನಪ್ಪಿದರೆ ಯಾರು ಹೊಣೆ ? ಎನ್ನುತ್ತಾರೆ ಮೀನುಗಾರಿಕಾ ಅಧಿಕಾರಿ. ಮೀನುಗಾರಿಕಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ನಮ್ಮದೇ ಆದ ಯಾಂತ್ರಿಕೃತ ಬೋಟ್ ಇಲ್ಲ. ಏನೇ ಆದರೂ ನಾವು ಕಡಲಕಾವಲು ಪಡೆಯ ಯಾಂತ್ರಿಕ ಬೋಟ್ ಬಳಸಿ ಕಡಲ ವೀಕ್ಷಣೆಗೆ ಹೋಗಬೇಕು. ಹೀಗಿರುವಾಗ ಮೀನುಗಾರರಲ್ಲಿ ನಾವು ಜಾಗೃತಿ ಮೂಡಿಸುತ್ತೇವೆ. ನಿಯಮ ಉಲ್ಲಂಘಿಸಿದರೆ ಬೋಟ್ ಲೈಸೆನ್ಸ ರದ್ದಾಗುತ್ತದೆ, ಎಂದು ಎಚ್ಚರಿಸಿದ್ದೇವೆ ಎನ್ನುತ್ತಾರೆ.
ಸೋಮವಾರದಿಂದ ಮೀನುಗಾರಿಕೆ ಆರಂಭ??
ರವಿವಾರತನಕ ಕಾಯುತ್ತೇವೆ, ಹವಮಾನದಲ್ಲಿ ಏರು ಪೇರು ಆಗದಿದ್ದರೆ, ಸೋಮವಾರ ಮೀನುಗಾರಿಕೆಗೆ ತೆರಳಿಯೇ ಸಿದ್ಧ ಎಂಬುದು ಹೆಸರು ಹೇಳಲು ಇಚ್ಚಿಸದ ಮೀನು ಬೋಟ್ ಮಾಲೀಕರ ಮಾತು. ಕಾರ್ಮಿಕರಿಗೆ ದಿನದ ವೇತನ ಕೊಡಲೇ ಬೇಕು. ಅವರು ಕಡಲಿಗೆ ಇಳಿಯಲಿ, ಬಿಡಲಿ ವೇತನ ಕೊಡಬೇಕು. ಬ್ಯಾಂಕ್ ಸಾಲ ಬೇರೆ ಇದೆ. ಹವಮಾನದ ಮುಖ ನೋಡಿ ಕುಳಿತರೆ ಸಾಲ ಮೈಮೇಲೆ ಬರುತ್ತದೆ. ನಾವು ಬದುಕುವುದಾದರೂ ಹೇಗೆ ಎಂಬುದು ಬೋಟ್ ಮಾಲೀಕರ ವಾದ. ಶುಕ್ರವಾರ ಹಗಲು ಸಮುದ್ರ ಸರಿಯಾಗಿಯೇ ಇತ್ತು. ಅಲೆಗಳ ಅಬ್ಬರ ಇರಲಿಲ್ಲ. ಸಂಜೆ ಇದ್ದಕ್ಕಿಂದ್ದಂತೆ ಬಲವಾದ ಗಾಳಿ ಬೀಸಿತು. ರಭಸದ ಮಳೆ ಸುರಿಯಿತು. ಶನಿವಾರ ಹಗಲು ಸಹಜವಾಗಿದೆ. ಸಹಜ ಸ್ಥಿತಿಯಲ್ಲಿ ಕಡಲು ಇದ್ದರೂ ನೀರಿಗೆ ಇಳಿಯದ ಪರಿಸ್ಥಿತಿ. ಏನೂ ಆಗಲಾರದು ಎಂದು ಕಡಲಿಗೆ ಇಳಿದರೆ ಜೂಜಾಡಿದ ಸನ್ನಿವೇಶ. ಮೀನುಗಾರಿಕಾ ಬೋಟ್ ಮಾಲೀಕರದ್ದು ಇಕ್ಕಟ್ಟಿನ ಸಂದರ್ಭ ಬಿಕ್ಕಟ್ಟಿನ ವಾತಾವರಣ ಎಂಬಂತಾಗಿದೆ.
ಹವಮಾನ ಇಲಾಖೆಯ ಸೂಚನೆ ಕಡೆಗಣಿಸಲಾಗದು:
ಮನ್ಸೂಚನೆಯ ಸಮಯದಲ್ಲಿ ಕಡಲಿಗೆ ಇಳಿಯುವಂತಿಲ್ಲ. ಇಳಿದರೆ , ಏನಾದರೂ ಅನಾಹುತವಾದಲ್ಲಿ ಪರಿಹಾರ ಸಿಗದು. ಇಂಥ ಪರಿಸ್ಥಿತಿಯನ್ನು ಮೀನುಗಾರಿಕಾ ಬೋಟ್ ಮಾಲೀಕರು ಅರ್ಥ ಮಾಡಿಕೊಳ್ಳಬೇಕು ಎಂಬುದು ಜಿಲ್ಲಾಡಳಿತದ ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಹಿಟ್ನಾಳ ಅವರ ಮಾತು.
ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್:
ಹವಮಾನ ವೈಪರಿತ್ಯ ಇದ್ದರೂ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಯುತ್ತಿದೆ ಎಂಬ ಮೀನುಗಾರಿಕಾ ಬೋಟ್ಗಳ ಓರ್ವ ಮಾಲೀಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ , ಪ್ರವಾಸಿಗರು ಆನ್ ಲೈನ್ನಲ್ಲಿ ಮೊದಲೇ ಸ್ಕೂಬಾಕ್ಕೆ ಬರುವುದಾಗಿ ಹೆಸರು ನೊಂದಾಯಿಸಿ ಹಣ ತುಂಬಿರುತ್ತಾರೆ. ಅವರು ದೂರದ ಊರುಗಳಿಂದ ಬಂದಾಗ ಹವಮಾನ ಕಾರಣ ನೀಡಿ ವಾಪಾಸ್ ಕಳಿಸಿದರೆ, ಗ್ರಾಹಕರ ವೇದಿಕೆಗೆ ತೆರಳಿ ಒಂದಕ್ಕೆ ಹತ್ತರಷ್ಟು ಹಣ ಕೇಳುತ್ತಾರೆ. ಅವರಿಗೆ ಅಪಾಯವಾಗದಂತೆ ಸ್ಕೂಬಾ ಮಾಡಿಸುವುದು ಅನಿವಾರ್ಯ. ಆನ್ ಲೈನ್ನಲ್ಲಿ ಪ್ರವಾಸಿಗ ಬುಕ್ ಮಾಡಿದಾಗ ಹವಮಾನ ವೈಪರಿತ್ಯದ ಮಾಹಿತಿ ಬಂದಿರಲಿಲ್ಲ. ಇಂಥ ಸಂದರ್ಭಗಳನ್ನು ನಿಭಾಯಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.