ಮಾನವ ಹಕ್ಕು ಉಲ್ಲಂಘನೆ ಪ್ರಕರಣ : ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರರು ನೀಡಿರುವ ವರದಿಗಳು ಏಕಪಕ್ಷೀಯ | Janata news
ಕಾರವಾರ : ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ದಾಖಲಾದ ಬಹುತೇಕ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರರು ನೀಡಿರುವ ವರದಿಗಳು ಏಕಪಕ್ಷೀಯವಾಗಿವೆ, ಎಂದು ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ರೂಪಕುಮಾರ ದತ್ತಾ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ನಡೆದ ಮಾನವ ಹಕ್ಕು ಉಲ್ಲಂಘನೆ ದೂರುಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಿಂದ ಆದ ಅನ್ಯಾಯದ ಬಗ್ಗೆ ದಾಖಲಾದ ದೂರಿಗೆ ಪೊಲೀಸರಿಂದ ಯಾವುದೇ ಅನ್ಯಾಯ ನಡೆದಿಲ್ಲ, ಎಂಬಂತಹ ವರದಿ ನೀಡಿರುವುದು ಹಾಸ್ಯಾಸ್ಪದ. ನಿಜವಾಗಿಯೂ ನೊಂದವರಿಗೆ ನ್ಯಾಯ ಸಿಗಬೇಕಾದರೆ ಸೂಕ್ತ ತನಿಖೆ ನಡೆಸಲು ಮರುದೂರು ದಾಖಲಿಸಿಕೊಂಡು ನ್ಯಾಯ ನೀಡಬೇಕು. ಒಂದುವೇಳೆ ಸುಳ್ಳು ಪ್ರಕರಣ ಎಂದು ಸಾಬೀತಾದರೆ, ಅಂತಹ ದೂರುದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ದೂರುದಾರರಿಗೆ ಸೂಕ್ತವಾಗಿ ಸ್ಪಂಧಿಸಿದ್ದರೆ, ದೂರುಗಳು ಆಯೋಗದ ವರೆಗೆ ಬರಲು ಅವಕಾಶವಾಗುವುದಿಲ್ಲ. ಆದ್ದರಿಂದ ಜಿಲ್ಲಾಡಳಿತ ದೂರುಗಳಿಗೆ ಪ್ರತಿಯಾಗಿ ಸ್ಪಂಧಿಸಿ ಸಂತ್ರಸ್ಥರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಬೇಕು. ಆದಷ್ಟು ಹೆಚ್ಚಿನ ಪ್ರಕರಣಗಳು ಕೆಳಮಟ್ಟದಲ್ಲಿಯೇ ಇತ್ಯರ್ಥವಾಗುವಂತಾಗಬೇಕು. ಪೊಲೀಸ್ ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ವೀಕರಿಸಿದ ದೂರುಗಳ ಸತ್ಯಾಂಶ ಪರೀಕ್ಷಿಸಿ ನಿಜ ಅಥವಾ ಸುಳ್ಳು ಪ್ರಕರಣಗಳ ಬಗ್ಗೆ ಪರಾಮರ್ಶಿಸಬೇಕು. ಆ ಮೂಲಕ ನೊಂದವರಿಗೆ ಸಹಾಯ ಮಾಡಬೇಕು, ಎಂದರು.
ಮಾನವ ಹಕ್ಕು ಆಯೋಗದ ಈ ಮೊದಲಿನ ನಿಯಮದಲ್ಲಿ ಪ್ರಕರಣ ಇತ್ಯರ್ಥ ಪಡಿಸಲು 6 ವಾರಗಳ ಬಳಿಕ ಸಮನ್ಸ್ ನೀಡಲು ಕಾಲಾವಕಾಶ ಇತ್ತು. ಈಗ ಒಂದು ತಿಂಗಳ ನೋಟೀಸ್ ನೀಡಿದ ಬಳಿಕ ಪ್ರಕರಣವನ್ನು ಆದಷ್ಟು ಶೀಘ್ರ ಬಗೆಹರಿಸಲಾಗುತ್ತದೆ ಎಂದು ರೂಪಕುಮಾರ ದತ್ತಾ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇರಿಸಿ ಸಾರ್ವಜನಿಕರು ದೂರು ದಾಖಲಿಸುತ್ತಾರೆ. ಆದರೆ ಅಲ್ಲಿ ನ್ಯಾಯ ಸಿಗದಿದ್ದಾಗ,ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಜಿಲ್ಲಾಡಳಿತ ಸರಿಯಾಗಿ ಸ್ಪಂಧನೆ ನೀಡಿದರೆ,ಮೇಲ್ಮಟ್ಟಕ್ಕೆ ದೂರು ನೀಡುವ ಅನಿವಾರ್ಯತೆಯೇ ಇರುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಜಿಲ್ಲಾಡಳಿತಕ್ಕೆ ಬಹುತೇಕ ಪ್ರಕರಣಗಳು ಅಷ್ಟೇನೂ ಗಂಭೀರ ಸ್ವರೂಪದಾಗಿರುವುದಿಲ್ಲ. ಇಲ್ಲಿನ ನಗರಸಭೆಯ ವ್ಯಾಪ್ತಿಯಲ್ಲಿ ಖಾಸಗಿ ಜಮೀನು ಮಾಲೀಕರು, ನಗರಸಭೆವತಿಯಿಂದ ಕೊಂಬ್ಳೆ ಮರ ಕಡಿಯಬೇಕು. ತನ್ನದೇ ಜಮೀನಿನಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಹಾಗೂ ಗೂಡಂಗಡಿ ತೆರುವುಗೊಳಿಸಬೇಕು, ಎಂದು ದೂರು ನೀಡಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರಸಭೆ ಅನುದಾನದಲ್ಲಿ ಖಾಸಗಿ ಜಮೀನಿನಲ್ಲಿರುವ ಮರ ಕಡಿಯುವುದಕ್ಕಾಗಲಿ ಅಥವಾ ಶಿಥಿಲಾವಸ್ಥೆಯ ಕಟ್ಟಡ ಇಲ್ಲವೇ ಗೂಡಂಗಡಿ ತೆರುವುಗೊಳಿಸಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಎಸ್ಪಿ ವಿನಾಯಕ ಪಾಟೀಲ, ಸಿಒ ಎಂ. ರೋಷನ್, ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.