40 ಜನರ ಪ್ರಾಣ ಉಳಿಸಿ ಸೂಪರ್ ಹೀರೋ ಆದ ರೈಲ್ವೆ ಗೇಟ್ಮನ್ | Janata news
ಬೆಳಗಾವಿ : ಬೆಳಗಾವಿ ತಾಲೂಕಿನ ಗೋದಗೇರಿ ಗ್ರಾಮದ ಬಳಿ ವಾಯವ್ಯ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕಕ್ಕೆ ಸೇರಿದ ಬಸ್ ಬುಧವಾರ ಬ್ರೇಕ್ ಫೇಲ್ ಆದ ಕಾರಣ ಮುಚ್ಚಿದ ರೈಲ್ವೆ ಗೇಟ್ಗೆ ಅಪ್ಪಳಿಸಿ ಮುಂದೆ ನುಗ್ಗಿ ರೈಲ್ವೆ ಹಳಿಗಳ ಮೇಲೆ ನಿಂತು ಕೆಲಕಾಲ ಆತಂಕ ಮೂಡಿಸಿತು. ಇದನ್ನು ಗಮನಿಸಿದ ರೈಲ್ವೆ ಗೇಟ್ಮನ್ ಸಮಯಪ್ರಜ್ಞೆ ಮೆರೆದು ರೈಲು ಹಳಿಗಳ ಗುಂಟು ಓಡಿ ಕೆಂಪು ನಿಶಾನೆ ತೋರಿಸುವ ಮೂಲಕ ರೈಲನ್ನು ನಿಲ್ಲಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಘಟನೆಯ ವಿವರ -
ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೋದಗೇರಿಯ ರೈಲ್ವೆ ಗೇಟ್ ಬಳಿ ಆ ಗ್ರಾಮದಿಂದ ಪಟ್ಟಣಕ್ಕೆ ಮರಳುತ್ತಿದ್ದ ಬಸ್ ನ ಬ್ರೇಕ್ ಇದ್ದಕ್ಕಿದ್ದಂತೆ ಫೇಲ್ ಆಗಿದೆ. ಹೀಗಾಗಿ, ರೈಲು ಬರುವ ಸಮಯವಾದ್ದರಿಂದ ಬಂದ್ ಆಗಿದ್ದ ರೈಲ್ವೆ ಗೇಟ್ಗೆ ಬಸ್ ಅಪ್ಪಳಿಸಿದ್ದು, ವಿಚಲಿತರಾದ ಚಾಲಕ ಎಂ.ಎಸ್. ಗುಡಗುಡಿ ರೈಲು ಹಳಿಗಳ ಮೇಲೆ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಲೋಂಡಾದತ್ತ ಬರುತ್ತಿದ್ದ ಹುಬ್ಬಳ್ಳಿ-ಮಿರಜ್ ಪ್ಯಾಸೆಂಜರ್ ರೈಲನ್ನು ಗಮನಿಸಿದ ಗೇಟ್ ಮ್ಯಾನ್ ಕೆಂಪು ಬಾವುಟದೊಂದಿಗೆ ಹಳಿಗಳಗುಂಟ ಓಡಿ ಚಾಲಕರಿಗೆ ಸೂಚನೆ ನೀಡಿ ರೈಲನ್ನು ನಿಲ್ಲಿಸಿದ್ದಾರೆ.
ನಂತರ ಸಮೀಪದ ದೇವರಾಯಿ ರೈಲು ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಹಳಿಯ ಮೇಲೆ ನಿಂತಿದ್ದ ಬಸ್ಸನ್ನು ಸ್ಥಳೀಯರ ಸಹಾಯದಿಂದ ಪಕ್ಕಕ್ಕೆ ಸರಿಸಿ ರೈಲು ಮುಂದೆ ಸಾಗಲು ಅನುವು ಮಾಡಿಕೊಟ್ಟಿದ್ದಾರೆ. ಇಷ್ಟೆಲ್ಲ ನಡೆಯುವರೆಗೆ ರೈಲು ಅರ್ಧ ಗಂಟೆ ನಿಂತಿದ್ದು, ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಬಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್ನಲ್ಲಿ ಸುಮಾರು 40 ಜನ ಪ್ರಯಾಣಿಸುತ್ತಿದ್ದು ಎಲ್ಲರೂ ಸಂಭವನೀಯ ದುರಂತದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.