ಚಳುವಳಿಗಾರರ ಮೇಲೆ ದೌರ್ಜನ್ಯ : ಕೇರಳಕ್ಕೆ ಬಿಜೆಪಿ ಪ್ರತಿನಿಧಿಗಳ ತಂಡ | Janata news
ನವದೆಹಲಿ : ಕೇರಳ ಶಬರಿಮಲೆಯಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿ ಸತ್ಯಾಗ್ರಹ ನಡೆಸುತ್ತಿರುವವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಬಿಜೆಪಿ ರಾಷ್ಟೀಯ ನಾಯಕರು ತಮ್ಮ ಕಳವಳ ವ್ಯಕ್ತಪಡಿಸಿದ್ದು. ಈ ಕುರಿತು ಅಧ್ಯಯನ ನಡೆಸಲು ನಾಲ್ಕು ಲೋಕಸಭಾ ಸದಸ್ಯರನ್ನೊಳಗೊಂಡ ಪಕ್ಷದ ಪ್ರತಿನಿಧಿಗಳ ತಂಡವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಚಿಸಿದ್ದಾರೆ.
ಈ ಪ್ರತಿನಿಧಿಗಳ ತಂಡದಲ್ಲಿ ರಾಜ್ಯದ ಸಂಸದರಾದ ಪ್ರಹ್ಲಾದ ಜೋಷಿ ಹಾಗೂ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಕುಮಾರಿ ಸರೋಜ ಪಾಂಡೆ ಮತ್ತು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟೀಯ ಅಧ್ಯಕ್ಷ, ಸಂಸದ ವಿನೋದ ಸೊಂಕರ್ ಇರಲಿದ್ದಾರೆ.
ಈ ಪ್ರತಿನಿಧಿಗಳ ತಂಡ ಕೇರಳದಲ್ಲಿ ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚಳುವಳಿ ಹಾಗೂ ಚಳುವಳಿಗಾರರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಈ ಚಳುವಳಿ ನಡೆದ ಸಂದರ್ಭದಲ್ಲಿ ವಿವೇಚನಾರಹಿತವಾಗಿ ಬಂಧನ ನಡೆಸಿದ ಪೋಲೀಸರ ಕ್ರಮದ ಕುರಿತು ಮಾಹಿತಿ ಕಲೆಹಾಕಲಿದೆ. ಅಲ್ಲದೇ, ಈ ತಂಡ ಅಲ್ಲಿಯ ಸಾರ್ವಜನಿಕರನ್ನೂ ಹಾಗೂ ಪಕ್ಷದ ಕಾರ್ಯಕರ್ತರನ್ನೂ ಭೇಟಿ ಮಾಡಲಿದ್ದು, 15 ದಿನಗಳೊಳಗೆ ತಮ್ಮ ವರದಿಯನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗೆ ಕಳುಹಿಸಲಿದೆ.
ಕೇರಳ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳಾ ಪ್ರವೇಶಕ್ಕೆ ಸಂಬಂಧಿಸಿದ ಸುಪ್ರಿಂಕೋರ್ಟ್ ತೀರ್ಪು ನೀಡಿದ ನಂತರ ಅಕ್ಷರಸಃ ಪ್ರತಿಭಟನೆಕಾರರ ಹಾಗೂ ಎಡಪಂತಿಯ ಸರ್ಕಾರದ ಜಿದ್ದಾಜಿದ್ದಿಯ ಅಖಾಡವಾಗಿ ಕೇರಳ ಪರಿವರ್ತಿತವಾಗಿದೆ. ಈ ಮಧ್ಯೆ ಅಯ್ಯಪ್ಪಸ್ವಾಮಿ ಭಕ್ತರ ಮೇಲೆ ಕೇರಳ ಪಿಣರಾಯಿ ಸರ್ಕಾರದ ಆಜ್ಞೆ ಮೇರೆಗೆ ಪೊಲೀಸರು ತೀವ್ರ ದಬ್ಬಾಳಿಕೆ ನಡೆಸಿದ್ದಾರೆ, ಎಂಬ ಕೂಗು ಕೇಳಿಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಡಿಯೊಗಳು ಹರಿದಾಡುತ್ತಿದೆ.