ಬರ, ನೆರೆ ಅಧ್ಯಯನಕ್ಕೆ ಸಮಿತಿಗಳ ರಚನೆ: ಕಂದಾಯ ಸಚಿವ ದೇಶಪಾಂಡೆ | Janata news
ಬೆಂಗಳೂರು : ಬೆಂಗಳೂರು- ರಾಜ್ಯದಲ್ಲಿರುವ ಬರಪೀಡಿತ ಮತ್ತು ಪ್ರವಾಹಪೀಡಿತ ಪ್ರದೇಶಗಳ ಅಧ್ಯಯನ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳನ್ನು ಕುರಿತು ಪರಿಶೀಲಿಸಲು ಹಿರಿಯ ಸಚಿವರ ನೇತೃತ್ವದಲ್ಲಿ ನಾಲ್ಕು ಸಮಿತಿಗಳನ್ನು ರಚಿಸಿ, ಶನಿವಾರ ಆದೇಶ ಹೊರಡಿಸಿದೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ``ಈ ಸಮಿತಿಗಳ ಪೈಕಿ ಬೆಳಗಾವಿ ಕಂದಾಯ ವಿಭಾಗದ ಸಮಿತಿಗೆ ತಾವು ಅಧ್ಯಕ್ಷರಾಗಿದ್ದು, ಉಳಿದಂತೆ ಕಲಬುರಗಿ ವಿಭಾಗದ ಸಮಿತಿಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಬೆಂಗಳೂರು ವಿಭಾಗದ ಸಮಿತಿಗೆ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮತ್ತು ಮೈಸೂರು ವಿಭಾಗದ ಸಮಿತಿಗೆ ಗ್ರಾಮೀಣಾಭಿವೃದ್ಧಿ-ಪಂಚಾಯತಿರಾಜ್ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷರಾಗಿರುತ್ತಾರೆ,’’ ಎಂದು ವಿವರಿಸಿದ್ದಾರೆ.
ಈ ಸಮಿತಿಗಳು ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ, ಅಂತಿಮವಾಗಿ ವಸ್ತುಸ್ಥಿತಿ ವರದಿಯನ್ನು ಸರಕಾರಕ್ಕೆ ವರದಿ ಮಾಡಲಿವೆ. ನಾಲ್ಕೂ ಸಮಿತಿಗಳಿಗೆ ಕ್ರಮವಾಗಿ ಕಂದಾಯ (ವಿಪತ್ತು ನಿರ್ವಹಣೆ, ಭೂಮಿ ಮತ್ತು ಯುಪಿಒಆರ್), ಸಹಕಾರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಮನ್ವಯ ಅಧಿಕಾರಿಗಳಾಗಿರುತ್ತಾರೆ, ಎಂದು ದೇಶಪಾಂಡೆ ಮಾಹಿತಿ ನೀಡಿದ್ದಾರೆ.
ಸಮಿತಿಯ ಸದಸ್ಯರ ವಿವರಗಳು:
• ಮೈಸೂರು ವಿಭಾಗ: ಸಚಿವರುಗಳಾದ ರಮೇಶ ಜಾರಕಿಹೊಳಿ, ಶಿವಾನಂದ ಪಾಟೀಲ, ಜಮೀರ್ ಅಹ್ಮದ್ ಖಾನ್, ಎಂ.ಸಿ.ಮನಗೂಳಿ.
• ಕಲಬುರಗಿ ವಿಭಾಗ: ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ರಾಜಶೇಖರ ಪಾಟೀಲ್ ಹುಮ್ನಾಬಾದ್, ಆರ್.ಶಂಕರ್, ವೆಂಕಟರಾವ್ ನಾಡಗೌಡ.
• ಬೆಂಗಳೂರು ವಿಭಾಗ: ಸಚಿವರುಗಳಾದ ಡಿ.ಕೆ.ಶಿವಕುಮಾರ್, ವೆಂಕಟರಮಣಪ್ಪ, ಎಸ್.ಆರ್.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ
• ಮೈಸೂರು ವಿಭಾಗ: ಸಚಿವರುಗಳಾದ ಎಚ್.ಡಿ.ರೇವಣ್ಣ, ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಜಯಮಾಲಾ, ಸಿ.ಪುಟ್ಟರಂಗಶೆಟ್ಟಿ.