ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಾ.ಪ. ಸದಸ್ಯ | Janata news
ಕಾರವಾರ : ತಾಲೂಕು ಪಂಚಾಯಿತಿ ಸದಸ್ಯನೊಬ್ಬ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಿಗೆ ಆಸಿಡ್ ಎರಚುವ ಬೆದರಿಕೆಯೊಡ್ಡಿದ್ದಲ್ಲದೇ ಆತನನ್ನು ಹಿಗ್ಗಾಮುಗ್ಗಾ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಬಿಜೆಪಿಯ ಕಾರ್ಯಕರ್ತ ಹರೀಶ ನಾಗೇಕರ್ ಎಂಬುವವರೇ ತಾಪಂ ಸದಸ್ಯ ಪ್ರಶಾಂತ ಗೊವೇಕರ್ರಿಂದ ಥಳಿತಕ್ಕೊಳಗಾದ ವ್ಯಕ್ತಿ. ಕಳೆದ ತಾಪಂ ಚುನಾವಣೆಯಲ್ಲಿ ಪ್ರಶಾಂತ ಗೋವೆಕರ್ ಬಿಜೆಪಿ ಟಿಕೇಟ್ನಿಂದ ಸ್ಪರ್ಧಿಸಿ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಪ್ರಶಾಂತ ಗೋವೆಕರ್ ಬಿಜೆಪಿಯಿಂದ ಅಮಾನತ್ತುಗೊಂಡಿದ್ದರು. ಈ ರಾಜಕೀಯ ವೈಷಮ್ಯವೇ ಹಲ್ಲೆಗೆ ಕಾರಣವೆನ್ನಲಾಗಿದೆ.
ಹಲ್ಲೆಗೊಳಗಾದ ಹರೀಶ ನಾಗೇಕರ್ ಅವರ ಪ್ರಕಾರ, ಇತ್ತಿಚೇಗೆ ಕಿನ್ನರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಅವರು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಒಟ್ಟು 319 ಗ್ರಾಮಸ್ಥರಿಗೆ ಸಿಲೆಂಡರ್ ವಿತರಿಸಿದ್ದರು. ಈ ಕಾರ್ಯಕ್ರಮದಿಂದ ದೂರವೇ ಉಳಿದಿದ್ದ ತಾಪಂ ಸದಸ್ಯ ಗೋವೆಕರ್ ತನ್ನ ವಿರುದ್ಧ ಹರೀಶ ನಾಗೇಕರ ರಾಜಕೀಯವಾಗಿ ಬೆಳೆಯುತ್ತಿದ್ದಾನೆ ಎಂದು ಅಸೂಯೆ ಪಡುತ್ತಿದ್ದ.
ಗುರುವಾರ ಹರೀಶ ನಾಗೇಕರ್ ಮಡಗಾಂವ್ಗೆ ತೆರಳಲು ತನ್ನ ಬೈಕ್ನ್ನು ನಗರದ ಗೀತಾಂಜಲಿ ಥೇಟರ್ ಬಳಿ ನಿಲ್ಲಿಸಲು ಹೋದಾಗ, ದ್ವಿಚಕ್ರ ವಾಹನದಲ್ಲಿ ಆಗಮಸಿದ ಪ್ರಶಾಂತ ಗೋವೆಕರ್ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತನ್ನ ಕೈಯಲ್ಲಿರುವ ಎಸಿಡ್ ಬಾಟಲಿಯನ್ನು ತೋರಿಸಿ, ಇನ್ನು ಮುಂದೆ ತನ್ನ ಎದರು ರಾಜಕೀಯ ಮಾಡುವುದನ್ನು ಬಿಟ್ಟು ದೂರ ಹೋಗದಿದ್ದರೇ ಎಸಿಡ್ ಎರಚಲು ಹಿಂದೆ ಮುಂದೆ ನೋಡುವುದಿಲ್ಲ, ಎಂದು ಬೆದರಿಕೆ ಹಾಕಿದ್ದಾನೆ ಎಂದು ನಾಗೇಕರ್ ಆರೋಪಿಸಿದ್ದಾರೆ.
ಬಳಿಕ ಹರೀಶನನ್ನು ಆತನ ಸ್ನೇಹಿತರು ಕೂಡಲೇ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಯಲ್ಲಿ ಹರೀಶನ ಒಂದು ಕೈಬೆರಳು ಮುರಿದಿದ್ದು, ಕೈ, ಕುತ್ತಿಗೆ ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿದೆ.
ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.