ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಏಮ್ಸ್ ಆಸ್ಪತ್ರೆಗೆ ದಾಖಲು | Janata news
ನವದೆಹಲಿ : ಭಾರತೀಯ ಜನತಾ ಪಾರ್ಟಿಯ(ಬಿಜೆಪಿ) ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವೈನ್ ಫ್ಲೂ(ಹಂದಿಜ್ವರ) ಇಂದ ಬಳಲುತ್ತಿರುವ ಅವರು ಚಿಕಿತ್ಸೆಗಾಗಿ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಹೇಳಿಕೊಂಡಿರುವ ಷಾ ಅವರು, ನನಗೆ ಹಂದಿಜ್ವರ ಬಂದಿದೆ, ಇದರ ಚಿಕಿತ್ಸೆ ಈಗಾಗಲೇ ಆರಂಭವಾಗಿದೆ. ಈಶ್ವರನ ಕೃಪೆಯಿಂದ, ನಿಮ್ಮೆಲ್ಲರ ಪ್ರೀತಿ ಹಾಗೂ ಶುಭಹಾರೈಕೆಯಿಂದ ಅತಿಶಿಘ್ರದಲ್ಲಿ ಗುಣಮುಖನಾಗಿ ಬರುತ್ತೇನೆ, ಎಂದಿದ್ದಾರೆ.
ಅಮಿತ್ ಶಾ ಅವರಲ್ಲಿ ಉಸಿರಾಟದ ತೊಂದರೆ ಹಾಗೂ ಎದೆ ಉಬ್ಬರಿಕೆ ತೊಂದರೆ ಕಾಣಿಸಿಕೊಂಡಿತ್ತು. ರಾತ್ರಿ 9ರ ಸಮಯವಾದ್ದರಿಂದ ಹಳೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಯ ಮೂಲಕ ಹಂದಿ ಜ್ವರ ಆವರಿಸಿದೆ ಎಂದು ತಿಳಿದು ಬಂದಿದೆ. ಸದ್ಯ ಶಾ ಅವರ ಸ್ಥಿತಿಗತಿ ಸುಧಾರಿಸಿದೆ ಎಂದು ಏಮ್ಸ್ ಆಸ್ಪತ್ರೆಯ ನಿರ್ದೇಶಕ ರಣ್ದೀಪ್ ಗುಲ್ವೇರಿಯಾ ತಿಳಿಸಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಪ್ರಮುಖರು ಒಬ್ಬೊಬ್ಬರಾಗಿ ಅನಾರೋಗ್ಯಕ್ಕೆ ಈಡಾಗುತ್ತಿರುವುದು ಬಿಜೆಪಿ ಪಾಳಯದಲ್ಲಿ ಸ್ವಲ್ಪ ಮಟ್ಟಿಗೆ ತಳಮಳಕ್ಕೆ ಕಾರಣವಾಗಿದೆ. ಕೇಂದ್ರ ವಿದೇಶಾಂಗ ಸಚಿವೆ ಹಾಗೂ ಪಕ್ಷದ ಪ್ರಭಾವಿ ನಾಯಕಿ ಸುಷ್ಮಾ ಸ್ವರಾಜ್ ಅನಾರೋಗ್ಯದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಸದ್ಯದಲ್ಲೇ ನಡೆಯಬೇಕಾದ ಮದ್ಯಂತರ ಬಜೆಟ್ ಸಂದರ್ಭದಲ್ಲೇ ವಿತ್ತ ಮಂತ್ರಿ ಅರುಣ್ ಜೇಟ್ಲಿ ಕ್ಯಾನ್ಸರ್ ಚಿಕಿತ್ಸೆಗೆಂದು ಅಮೇರಿಕಾಗೆ ಭೇಟಿ ನೀಡಿದ್ದಾರೆ. ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.