ಶ್ರೀಗಳ ಕ್ರಿಯಾ ಸಮಾಧಿಗೆ ಸಿದ್ಧತೆ: ವೀರಶೈವ ಲಿಂಗಾಯಿತ ಆಗಮೋಕ್ತ ರೀತಿ | Janata news
ತುಮಕೂರು : ಶ್ರೀಗಳ ಸೂಚನೆಯಂತೆ ಕ್ರಿಯಾ ಸಮಾಧಿಯ ಕಟ್ಟಡ ವಿನ್ಯಾಸ ಮಾಡಲಾಗಿದೆ. ಸುಮಾರು 5 ವರ್ಷದ ಹಿಂದೆ ಆರಂಭಿಸಿ ಇತ್ತೀಚಿಗೆ ಅಂತ್ಯವಾಗಿದೆ ಕಟ್ಟಡ ಕಾರ್ಯ. ಹಳೇ ಮಠದಿಂದ ಬರುವ ಮಾರ್ಗದಲ್ಲಿ ಉದ್ಧಾನ ಶಿವಯೋಗಿ ಗದ್ದುಗೆ ಪಕ್ಕ ಕಟ್ಟಡ ನಿರ್ಮಿಸಲಾಗಿದೆ. ಶ್ರೀಗಳ ಕ್ರಿಯಾ ಸಮಾಧಿಯ ವಿಧಿವಿಧಾನಗಳು ವೀರಶೈವ ಲಿಂಗಾಯಿತ ಆಗಮೋಕ್ತ ರೀತಿಯಲ್ಲಿ ನಡೆಯಲಿದೆ.
- ಮೊದಲಿಗೆ ನಾಡಿನ ಪುಣ್ಯ ನದಿಗಳಿಂದ ತರಲಾದ ತೀರ್ಥಗಳಿಂದ ಪಾರ್ಥಿವ ಶರೀರಕ್ಕೆ ಅಂತಿಮ ಪುಣ್ಯಸ್ನಾನ ನೆರವೇರಿಸಲಾಗುತ್ತದೆ. ಬಳಿಕ ಹೊಸ ಕಾಷಾಯ ವಸ್ತ್ರ ಧಾರಣೆ ಮಾಡಲಾಗುತ್ತದೆ.
- ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳಿಗೆ ಮಠದ ಅಧಿಕಾರ/ ಪಟ್ಟಾಧಿಕಾರ ಹಸ್ತಾಂತರ ನೆರವೇರಿಸಲಾಗುತ್ತದೆ.
- ವಿಧಿವಿಧಾನ ನಡೆದ ನಂತರ ಪಾರ್ಥಿವ ಶರೀರವನ್ನು ಗದ್ದುಗೆ ಒಳಗೆ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ. ಶ್ರೀಗಳ ಕೈಯಲ್ಲಿ ಇಷ್ಟ ಲಿಂಗವನ್ನ ಇಡಲಾಗುತ್ತದೆ.
- ಇದಾದ ಮೇಲೆ ರುದ್ರಾಕ್ಷ ಮಂತ್ರ ಪಠಣ ಮಾಡುತ್ತಾ ಶ್ರೀಗಳ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಗುತ್ತದೆ. ನಂತರ ಮಹಾಮಂಗಳಾರತಿ ನಡೆಸಲಾಗುತ್ತದೆ.
- ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಶ್ರೀಗಳ ಪಾರ್ಥಿವ ಶರೀರವನ್ನ ಮುಚ್ಚಲಾಗುತ್ತದೆ. ಪಾರ್ಥಿವ ಶರೀರದ ತಲೆಭಾಗವನ್ನ ಬಿಲ್ವಪತ್ರೆಯಿಂದ ತುಂಬಲಾಗುತ್ತದೆ.
- ಅದರ ಮೇಲೆ ಮಣ್ಣು ಹಾಕಿದ ನಂತರ ಚಪ್ಪಡಿ ಕಲ್ಲನ್ನು ಇಟ್ಟು ಗದ್ದುಗೆ ನಿರ್ಮಾಣ ಮಾಡಲಾಗುತ್ತದೆ. ಗದ್ದುಗೆ ಮೇಲೆ ಲಿಂಗ ಸ್ಥಾಪನೆ ಮಾಡಲಾಗುತ್ತದೆ.