ದಬ್ಬಾಳಿಕೆ ರಾಜಕಾರಣ ನಮ್ಮ ಕುಟುಂಬದಲ್ಲಿ ಬಂದಿಲ್ಲ, ಪ್ರೀತಿ-ವಿಶ್ವಾಸದ ರಾಜಕೀಯ ಮಾಡಿದ್ದೇವೆ:ಎಚ್ಡಿಕೆ | Janata news
ಹಾಸನ : ದೇವೇಗೌಡರ ಕುಟುಂಬ ನನ್ನ ವಿರುದ್ಧ ರಾಜಕೀಯ ಗೂಂಡಾಗಿರಿ ಪ್ರದರ್ಶಿಸಿದೆ ಎಂಬ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಕುಮಾರಸ್ವಾಮಿ, ದಬ್ಬಾಳಿಕೆ ರಾಜಕಾರಣ ನಮ್ಮ ಕುಟುಂಬದಲ್ಲಿ ಬಂದಿಲ್ಲಾ. ನಮ್ಮ ಕುಟುಂಬ ಜನರ ಪ್ರೀತಿಯಿಂದ ರಾಜಕಾರಣ ಮಾಡುತ್ತಾ ಬಂದಿದೆ ಎಂದು ಹೇಳಿದ್ದಾರೆ.
ಹಾಸನದಲ್ಲಿ ರೈತರಿಗೆ ಋಣಮುಕ್ತ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ವಿಕೇಟ್ ಉರುಳುತ್ತೆ ಅಂತಾ ಕೆಲವರು ಹೇಳಿದರು. ಅದು ಅವರ ಸಂಸ್ಕಾರ ತೋರಿಸುತ್ತದೆ ಎಂದು ಅವರು ಹೇಳಿದರು. ಆದರೆ, ನಾವು ಯಾವತ್ತೂ ದಬ್ಬಾಳಿಕೆಯನ್ನು ಮಾಡಿ ರಾಜಕಾರಣ ಮಾಡಿಲ್ಲ, ಈಗಿನ ಕಾಲದಲ್ಲಿ ದಬ್ಬಾಳಿಕೆ ರಾಜಕಾರಣ ಮಾಡಿದರೆ ನಡೆಯುವುದಿಲ್ಲ ಎಂದು ಶಾಸಕ ಪ್ರೀತಮ್ ಗೌಡ ಅವರಿಗೆ ಸಿಎಂ ಪರೋಕ್ಷವಾಗಿ ಟಾಂಗ್ ನೀಡಿದರು.
ಮಣ್ಣಿನ ಮಗ ಎಂದು ಹೇಳಿ ಮಣ್ಣಿನ ಮಕ್ಕಳ ಸಾಲಮನ್ನಾದಲ್ಲಿ ಉಲ್ಟಾ ಹೊಡೆದ ಸಿಎಂ ಎಂದು ಹೇಳುತ್ತಿದ್ದರು. ಆದರೆ ನಮ್ಮ ಸರ್ಕಾರವು ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಹಾಸನಕ್ಕೆ ಐಐಟಿ ಬೇಕು ಎಂಬುದು ದೇವೇಗೌಡ ಅವರ ಆಸೆಯಾಗಿತ್ತು, ಅದರಂತೆ ರಾಜ್ಯಕ್ಕೆ ಐಐಟಿ ಘೋಷಣೆಯೂ ಆಯಿತು. ಹಾಸನ ಅಭಿವೃದ್ಧಿಗಷ್ಟೇ ಸೀಮಿತ ಈ ಸರ್ಕಾರ ಎಂದು ಕೆಲವರು ಹೇಳುತ್ತಾರೆ. ನಾನು ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ದೇವೇಗೌಡ, ಎಚ್ಡಿ ರೇವಣ್ಣ, ಸಚಿವ ಬಂಡೆಪ್ಪ ಕಾಶೆಂಪುರ, ಜಿಟಿ ದೇವೇಗೌಡ ಹಾಗೂ ಇನ್ನಿತರ ಸ್ಥಳೀಯ ಶಾಸಕರು ಭಾಗವಹಿಸಿದ್ದರು.