ಮೂವರು ಕುಖ್ಯಾತ ಅಂತರರಾಜ್ಯ ಕಳ್ಳರ ಬಂಧನ : ರೂ.8.5ಲಕ್ಷ ಮೌಲ್ಯದ ಚಿನ್ನಾಭರಣ ನಗದು ವಶ | Janata news
ಬೆಳಗಾವಿ : ಮೂವರು ಕುಖ್ಯಾತ ಅಂತರ ರಾಜ್ಯ ಕಳ್ಳರನ್ನು ಬಂಧಿಸಿ ರೂ 8,49,812 ಬೆಲೆ ಬಾಳುವ 313 ಗ್ರಾಂ ಬಂಗಾರ, ರೂ 14 ಸಾವಿರ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ಪಟ್ಟಣದ ಕಾಲೇಜ ರೋಡದಲ್ಲಿರುವ ಆನಂದ ಪತ್ತಾರ ಎಂಬುವರಿಗೆ ಸೇರಿದ ವಿನಾಯಕ ಜ್ಯುವೇಲರ್ಸ ಅಂಗಡಿಯಲ್ಲಿ ಹಾಡು ಹಗಲಿನಲ್ಲಿಯೇ ಕಳ್ಳರು ಅಂಗಡಿಯ ಮಾಲಿಕನ ಕಣ್ಣು ತಪ್ಪಿಸಿ 900 ಗ್ರಾಮ ಬಂಗಾರದ ಆಭರಣಗಳ
ಬ್ಯಾಗ್ ಕದ್ದು ಪರಾರಿಯಾಗಿದ್ದರು. ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರಿಂದ ಕಿತ್ತೂರು ಪಟ್ಟಣದ ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿತ್ತು. ಇದನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಳ್ಳರ ಬಂಧನಕ್ಕಾಗಿ ವಿಶೇಷ ತಂಡ
ರಚಿಸಿದ್ದರು.
ಕಳ್ಳರ ಶೋಧನೆಗಾಗಿ ಈ ತಂಡವು ವ್ಯಾಪಕ ಬಲೆ ಬಿಸಿತ್ತು. ಮೂರು ಜನ ಆರೋಪಿಗಳಲ್ಲಿ ಒಬ್ಬನನ್ನು ಬೆಳಗಾವಿಯಲ್ಲಿ ಇನ್ನಿಬ್ಬರನ್ನು ನಿಪಾಣಿಯಲ್ಲಿ ಬಂಧಿಸಿದ್ದಾರೆ. ಆರೋಪಿಗಳಾದ ಬಳ್ಳಾರಿಯ ರಾಮು ವೆಂಕಟೇಶ(20), ಭದ್ರಾವತಿಯ ಸುಭಾಸ ನಗರದ ರಾಮು ಪಕ್ಕಿರಪ್ಪ(52) ಹಾಗೂ ಭದ್ರಾವತಿಯ ಹೊಸ ಮನೆಯ ಮಂಜ್ಯಾ ಅಲಿಯಾಸ್ ಕೆ.ಮಂಜುನಾಥ ರಾಮು(40) ಎಂಬ ಆರೋಪಿಗಳನ್ನು ಬಂದಿಸಿದ್ದಾರೆ. ಇವರಿಂದ ರೂ 8,49,812 ಬೇಲೆ ಬಾಳುವ 313 ಗ್ರಾಂ ತೂಕದ ಬಂಗಾರ ಹಾಗೂ 14 ಸಾವಿರ ನಗದು
ಹಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂಳಿದ ಆರೋಪಿಗಳ ಪತ್ತೆಗಾಗಿ ಕಿತ್ತೂರು ಪೊಲೀಸರು ಜಾಲ ಬಿಸಿದ್ದಾರೆ.
ಸಿಪಿಐ ರಾಘವೇಂದ್ರ ಹವಾಲ್ದಾರ, ಬೆಳಗಾವಿ ಪಿ.ಎಸ್.ಐ, ಡಿ.ಎಸ್.ಬಿ ನಿಂಗನಗೌಡ ಪಾಟೀಲ, ಎ.ಎಸ್.ಐ ಡಿ.ಬಿ ಈಟಿ, ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಲ್.ಎಚ್ ನಾಯ್ಕರ, ಆಯ್.ಎನ್ ಜಿನ್ನವ್ವಗೋಳ, ಎನ್.ಆರ್ ಗಳಗಿ, ವಿ.ಎ ಠಕ್ಕನವರ, ಎಸ್. ಆಯ್ ಮಾನ್ಯದಮಠ, ಎಸ್.ಎಸ್ ಕಾಜಗಾರ, ಶ್ರೀ ಸಿ.ಎಸ್ ಬುದ್ನಿ, ಆರ್.ಐ ಕಾಜಗಾರ, ಕೆ.ವಿ ಮಗದುಮ್, ಎಲ್, ಎಫ್ ಜಂಬಲವಾಡ, ಎ.ಎಫ್ ಭಜಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿ ಸಚೀನ ಪಾಟೀಲ ಇವರನ್ನೊಳಗೊಂಡ ತನಿಖಾ ತಂಡ ಆರೋಪಿತರ ಪತ್ತೆಗಾಗಿ ಶ್ರಮಿಸಿದ್ದಾರೆ ಎಂದು ಕಿತ್ತೂರು ಪೋಲಿಸರು ತಿಳಿಸಿದ್ದಾರೆ.