ಸಾಮಾಜಿಕ ಜಾಲತಾಣಗಳಲ್ಲಿನ ಒಂದು ಪೋಸ್ಟ್ : ಬಡ ಅಂಧ ವ್ಯಕ್ತಿಯೊಬ್ಬರ ಬದುಕಿಗೆ ಆಸರೆ | Janata news
ಅಂಕೋಲಾ : ಸಾಮಾಜಿಕ ಜಾಲತಾಣದಲ್ಲಿ ಕೆಲ ಅಪರಿಚಿತ ಪ್ರವಾಸಿಗರು ಹಾಕಿದ ಪೋಸ್ಟ್ ನಿಂದ ಬಡ ಅಂಧ ವ್ಯಕ್ತಿಯೊಬ್ಬರ ಬದುಕಿಗೆ ಆಸರೆ ದೊರೆತಿದೆ. ಪ್ರಕೃತಿ ವಿಕೋಪ ಮತ್ತು ಜನ್ಮತಃ ಬಂದ ದೃಷ್ಟಿ ದೋಷದಿಂದ ಸರ್ವಸ್ವವನ್ನೂ ಕಳೆದುಕೊಂಡು ಅಸಹಾಯಕರಾಗಿದ್ದ ಕುಟುಂಬಕ್ಕೆ ಸಮಾಜದಲ್ಲಿ ಸ್ವಾಭಿಮಾನದ ಜೀವನ ನಡೆಸಲು ಸಂಘಟನೆಯೊಂದು ಅವಕಾಶ ಕಲ್ಪಿಸಿದೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಾಮಚಂದ್ರ ಶೆಟ್ಟಿ (45) ಹುಟ್ಟಿನಿಂದಲೇ ದೃಷ್ಟಿ ವಿಕಲತೆಯನ್ನು ಹೊಂದಿದ್ದಾರೆ. ಈತನ ವೃದ್ಧ ತಾಯಿ ಸುಮಾರು 75 ವರ್ಷದ ಸರೋಜಿನಿ ಶೆಟ್ಟಿ ಬೆನ್ನು ನೋವಿನಿಂದ ಬಳಲುತ್ತಿದ್ದು ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದಾರೆ. ಅಗಸೂರಿನಲ್ಲಿರುವ ಚಿಕ್ಕ ಗುಡಿಸಲೇ ಇವರ ಬದುಕಿಗೆ ಆಸರೆಯಾಗಿತ್ತು. ಆ ಗುಡಿಸಿಲಿನಲ್ಲೇ ಚಿಕ್ಕ ಅಂಗಡಿ ಇಟ್ಟುಕೊಂಡು ಈ ತಾಯಿ ಮಗ ಜೀವನ ನಡೆಸುತ್ತಿದ್ದರು.
ಆದರೆ ಕಳೆದ ಮಳೆಗಾಲದಲ್ಲಿ ಮಳೆಗಾಳಿಗೆ ಇದ್ದೊಂದು ಗುಡಿಸಲೂ ಸಹ ಕುಸಿದು ಬಿತ್ತು. ಆ ಸಂದರ್ಭದಲ್ಲಿ ವ್ಯಾಪಾರಕ್ಕಾಗಿ ಇಟ್ಟುಕೊಂಡಿದ್ದ ವಸ್ತುಗಳೂ ಸಹ ಮಣ್ಣುಪಾಲಾಗಿತ್ತು.
ಮಳೆಗಾಲದಲ್ಲಿ ಗುಡಿಸಲು ಮುರಿದು ಬಿದ್ದ ಬಳಿಕ ಅಗಸೂರು ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯರು ಸೇರಿ ಮನೆ ಮಂಜೂರು ಮಾಡಿಸಿ ಚಿಕ್ಕದಾದ ಮನೆಯನ್ನು ಸಹ ಕಟ್ಟಿಸಿಕೊಟ್ಟರು. ಆ ಚಿಕ್ಕದಾದ ಮನೆಯಲ್ಲಿ ಒಂದು ಭಾಗದಲ್ಲಿ ಹಿರಿಯ ಜೀವ ತಾಯಿಯೊಂದಿಗೆ ಮಗ ರಾಮಚಂದ್ರ ಕಷ್ಟದ ಜೀವನ ಸಾಗಿಸುತ್ತಿದ್ದ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಸುಮಾರು 15 ದಿನಗಳ ಹಿಂದೆ ಗೋವಾದಿಂದ ಹುಬ್ಬಳ್ಳಿಗೆ ಹೊರಟಿದ್ದ ಕೆಲ ಪ್ರವಾಸಿಗರು ಅಗಸೂರಿನ ಇವರ ಗುಡಿಸಲಿನ ಬಳಿ ವಾಹನ ನಿಲ್ಲಿಸಿ ನೀರಿನ ಬಾಟಲಿ ಖರೀದಿಸಲು ಬಂದರು. ರಾಮಚಂದ್ರ ಶೆಟ್ಟಿ ಮತ್ತು ಅವರ ತಾಯಿಯ ಸ್ಥಿತಿ ನೋಡಿ ಪ್ರವಾಸಿಗರ ಮನಸ್ಸು ಕರಗಿದೆ. ತಕ್ಷಣವೇ ಗುಡಿಸಲಿನಲ್ಲಿ ನಿಂತ ರಾಮಚಂದ್ರ ಮತ್ತು ಅವರ ವೃದ್ಧ ತಾಯಿಯ ಫೆÇೀಟೊ ತೆಗೆದು ಅವರ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಹಾಯಕ್ಕಾಗಿ ಕೇಳಿದ್ದಾರೆ.
ಆ ನಂತರ ಈ ಕುಟುಂಬದ ಕಣ್ಣೀರನ್ನು ಒರೆಸಲು ಮುಂದಾದ ಬೆಳಗಾವಿಯ ಕನ್ನಡ ವೈಶ್ಯ ಕ್ಷೇಮಾಭಿವೃದ್ಧಿ ಸಂಘಟನೆಯು ಈ ಕುಟುಂಬಕ್ಕೆ ಹೊಸದಾದ ಚಿಕ್ಕ ಅಂಗಡಿಯನ್ನೇ ನಿರ್ಮಿಸಿಕೊಡಲು ಮುಂದಾಯಿತು. ಸಂಘದ ಸದಸ್ಯ ಗದಗದ ಉದ್ಯಮಿ ದೀಪಕ್ ಶೆಟ್ಟಿ ಎಂಬುವವರು ಸುಮಾರು 1 ಲಕ್ಷ ರೂ. ವೆಚ್ಚದ ಗೂಡಂಗಡಿಯನ್ನು ಗದಗದಿಂದಲೇ ನಿರ್ಮಿಸಿಕೊಂಡು ಅಗಸೂರಿಗೆ ತಂದಿದ್ದಾರೆ. ಈಗಾಗಲೇ ಅಂಗಡಿಗೆ ಕಲ್ಲಿನ ಅಡಿಪಾಯವನ್ನು ನಿರ್ಮಿಲಾಗಿದೆ. ಆ ಅಡಿಪಾಯದ ಮೇಲೆ ಸಿದ್ಧ ಗೂಡಂಗಡಿಯನ್ನು ಅಳವಡಿಸಲಾಗಿದೆ. ಇನ್ನೂ ಚಿಕ್ಕಪುಟ್ಟ ಕೆಲಸಗಳು ನಡೆಯುತ್ತಿದೆ.
ಒಟ್ಟಾರೆ ಅಪರಿಚಿತ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಒಂದು ನೊಂದ ಕುಟುಂಬಕ್ಕೆ ಆಸರೆಯಾಗಿದೆ.
----------------------------------------------
ಮಾನವೀಯತೆ ಇನ್ನೂ ಇದೆ
ಮಳೆಗಾಲದಲ್ಲಿ ಮನೆ ನೆಲಸಮವಾದಾಗ ಇನ್ನು ಮುಂದಿನ ಗತಿ ಏನು ಎಂದು ಕಂಗಾಲಾಗಿದ್ದೆ. ತಾಯಿಗೆ ವಯಸ್ಸಾಗಿದ್ದು, ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಔಷಧಕ್ಕೆ, ದೈನಂದಿನ ಜೀವನಕ್ಕೆ ಹಣ ಹೊಂದಿಸುವ ಜೊತೆಗೆ ಉಳಿಯಲು ಇದ್ದ ಚಿಕ್ಕ ಆಸರೆಯೂ ಕೈತಪ್ಪಿ ಹೋಗಿ ಬದುಕು ಅತಂತ್ರವಾಗಿತ್ತು. ಆದರೆ ಗ್ರಾಪಂದವರು ಮತ್ತು ಊರಿನ ಜನ ಸೇರಿ ಮನೆ ನಿರ್ಮಿಸಿಕೊಟ್ಟರು. ಈಗ ಕನ್ನಡ ವೈಶ್ಯ ಸಂಘಟನೆಯವರು ಗೂಡಂಗಡಿಯನ್ನು ನಿರ್ಮಿಸಿಕೊಂಡು ತಂದು ಬದುಕಿಗೆ ನೆಲೆ ಒದಗಿಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸ್ಥಿತಿಯ ಬಗ್ಗೆ ಪೋಸ್ಟ್ ಮಾಡಿದವರ ಪರಿಚಯವಾಗಲಿ ಅಥವಾ ಅವರ ಹೆಸರು ಸಹ ನಮಗೆ ಗೊತ್ತಿಲ್ಲ. ಇದೆಲ್ಲ ನೋಡಿದಾಗ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಇದೆ ಎಂಬ ನಂಬಿಕೆ ಬರುತ್ತಿದೆ.
- ರಾಮಚಂದ್ರ ಶೆಟ್ಟಿ
---------------------------------------
ಸದ್ಯದಲ್ಲಿಯೇ ಅಂಗಡಿ ಹಸ್ತಾಂತರ...
ಅಂಗಡಿಗೆ ವಿದ್ಯುತ್ ಸಂಪರ್ಕ ಮತ್ತು ಚಿಕ್ಕಪುಟ್ಟ ವ್ಯವಸ್ಥೆಯನ್ನು ಕಲ್ಪಿಸಿ ಇನ್ನೂ ಕೆಲವೇ ದಿನಗಳಲ್ಲಿ ರಾಮಚಂದ್ರ ಶೆಟ್ಟಿ ಅವರಿಗೆ ಅಂಗಡಿಯನ್ನು ಹಸ್ತಾಂತರಿಸಲಾಗುತ್ತದೆ. ಇನ್ನು ಹೆಚ್ಚುವರಿಯಾಗಿ ನೂತನ ಅಂಗಡಿಯ ವ್ಯಾಪಾರಕ್ಕೆ ಬೇಕಾದ ಕಿರಾಣಿ ಸಾಮಾನು ಹಾಗೂ ಸ್ಟೇಶನರಿ ವಸ್ತುಗಳನ್ನು ಸಹ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸಮಾಜದಲ್ಲಿ ಆ ಕುಟುಂಬವೂ ಸಹ ಸ್ವಾವಲಂಭಿಯಾಗಿ ಬದುಕಲಿ ಎಂಬುದಷ್ಟೇ ನಮ್ಮ ಆಶಯ.
- ದೀಪಕ್ ಶೆಟ್ಟಿ
ಉದ್ಯಮಿಗಳು ಹಾಗೂ ಸದಸ್ಯರು ಕನ್ನಡ ವೈಶ್ಯ ಕ್ಷೇಮಾಭಿವೃದ್ಧಿ ಸಂಘ, ಗದಗ