ಶಾಸಕರಾದವರಿಗೆ ರಾಜೀನಾಮೆ ಯಾರಿಗೆ, ಹೇಗೆ ಕೊಡಬೇಕು ? ಎಂಬ ಅರಿವು ಇರಬೇಕು: ಆನಂದ್ ಸಿಂಗ್ ವಿರುದ್ಧ ಸ್ಪೀಕರ್ ಕೆಂಡಾಮಂಡಲ | Janata news
ಬೆಂಗಳೂರು : ಶಾಸಕರಾದವರಿಗೆ ಯಾರಿಗೆ ರಾಜೀನಾಮೆ ಕೊಡಬೇಕು ಎಂಬ ತಿಳುವಳಿಕೆ ಇರಬೇಕು. ರಾಷ್ಟ್ರಪತಿಗೆ ಬೇಕಾದರೂ ಕೊಡಲಿ ಎಂದು ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ಸಿಂಗ್ ಅವರು ರಾಜ್ಯಪಾಲರನ್ನು ಭೇಟಿಯಾದ ಬಗ್ಗೆ ಗಮನ ಸೆಳೆದಾಗ ಬಿಡುವಿದ್ದರೆ ದೆಹಲಿಗೂ ಹೋಗಿ ರಾಷ್ಟ್ರಪತಿಗೂ ಕೊಡಲಿ. ಯಾರೇ ಒಬ್ಬ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕಾನೂನು ರೀತಿ ನಿಯಮಾವಳಿಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
ಇಬ್ಬರು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಯಾರು ಹೇಳಿದ್ದಾರೆ ? ಅಧಿಕೃತವಾಗಿ ಒಬ್ಬ ಶಾಸಕರು ಮಾತ್ರ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸುತ್ತೇನೆ, ಜನರಿಗೆ ಶಾಸಕರ ವರ್ತನೆ ಇಷ್ಟ ಆಗದಿದ್ದಲ್ಲಿ ಅವರನ್ನು ತಿರಸ್ಕರಿಸುವ ಅವಕಾಶ ಸಂವಿಧಾನದಲ್ಲಿ ಇಲ್ಲ. ಕರ್ನಾಟಕ ವಿಧಾನಸಭೆಯ ಸದಸ್ಯರಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅದರ ಬಗ್ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಯಾರು ಬೇಕಾದರೂ ಆಕ್ಷೇಪ ವ್ಯಕ್ತಪಡಿಸಬಹುದು.
ಆನಂದ್ಸಿಂಗ್ ಅವರು ರಾಜೀನಾಮೆ ನೀಡಿರುವ ಪತ್ರ ತಲುಪಿದೆ. ಅವರು ಒಂದು ಪಕ್ಷದ ಶಾಸಕರಾಗಿದ್ದಾರೆ. ಆ ಪಕ್ಷದ ಹಾಗೂ ಜನರ ಆಕ್ಷೇಪವೇನಾದರೂ ಇದೆಯೋ ಗೊತ್ತಿಲ್ಲ. ರಾಜೀನಾಮೆಗೆ ಕಾರಣವೂ ಗೊತ್ತಿಲ್ಲ. ಚುನಾಯಿತ ಪ್ರತಿನಿಧಿಯ ನಡವಳಿಕೆ ಇಷ್ಟವಾಗದಿದ್ದರೆ ಅವರನ್ನು ವಾಪಸ್ ಕಳುಹಿಸುವ ಅವಕಾಶವೂ ಇಲ್ಲ ಎಂದು ತಿಳಿಸಿದರು.
ರಾಜೀನಾಮೆ ಕೊಟ್ಟ ಬಳಿಕ ಆನಂದ ಸಿಂಗ್ ರಾಜ್ಯಪಾಲರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ಪರಮಾಧಿಕಾರ ಇಲ್ಲ. ನನಗೆ ಜವಾಬ್ದಾರಿ ಇದೆ, ಶಾಸಕರಾದವರಿಗೆ ರಾಜೀನಾಮೆ ಯಾರಿಗೆ ಕೊಡಬೇಕು ? ಹೇಗೆ ಕೊಡಬೇಕು ? ಎಂಬ ಅರಿವು ಇರಬೇಕು. ಆ ಬಗ್ಗೆ ಅವರಿಗೆ ತಿಳುವಳಿಕೆಯೇ ಇಲ್ಲ ಎಂದರೆ ಅದು ನಮ್ಮ ಹಣೆಬರಹ, ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಕೊಟ್ಟಿದ್ದಾರೆ ಅಂದರೆ ಬೇರೆ ಉದ್ದೇಶ ಇರಬೇಕು. ಸಮಯ ಇದ್ದರೆ ರಾಷ್ಟ್ರಪತಿಯವರನ್ನೂ ಭೇಟಿಮಾಡಿ ರಾಜೀನಾಮೆ ಕೊಡಲಿ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.