ನಾನು ನಾನ್ವೆಜ್ ತಿನ್ನುವುದನ್ನೇ ಬಿಟ್ಟಿದ್ದೇನೆ, ನಾನು ಬಿರಿಯಾನಿ ತಿಂದಿಲ್ಲ: ಎಚ್ಡಿ ಕುಮಾರಸ್ವಾಮಿ | Janata news
ಬೆಂಗಳೂರು : ನನಗೂ ಬಿರಿಯಾನಿ ಕಥೆಗೂ ಯಾವುದೇ ಸಂಬಂಧಗಳಿಲ್ಲ ಎಂದು ಐಎಂಎ ಪ್ರಕರಣದ ಕುರಿತು ಸಿಎಂ ಕುಮಾರಸ್ವಾಮಿ ಸದನದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಕೃಷ್ಣ ಬೈರೇಗೌಡ ಐಎಂಎ ಹಗರಣದ ಕುರಿತು ವಿಷಯ ಪ್ರಸ್ತಾಪ ಮಾಡಿದರು.
ಐಎಂಎ ಕಂಪನಿಯ ಬಗ್ಗೆ ಹಿಂದೊಮ್ಮೆ ದೂರು ಹೋಗಿತ್ತು. ಯಾರ ಕೈಯ್ಯಲ್ಲಿ ಸರ್ಕಾರವಿತ್ತೋ, ಯಾರ ಬಳಿ ಗುಪ್ತಚರ ಇಲಾಖೆಯಿತ್ತೋ ಅವರು ತನಿಖೆ ನಡೆಸಿ, ಕಂಪನಿಗೆ ಕ್ಲೀನ್ಚಿಟ್ ಕೊಟ್ಟು ಕಳಿಸಿದರು. ಅಂದು ಕ್ಲೀನ್ ಚಿಟ್ ತೆಗೆದುಕೊಂಡವನು ಇಂದು ಜೈಲಿನಲ್ಲಿದ್ದಾನೆ. ಆದರೆ, ಹಿಂದೆ ಕ್ಲೀನ್ಚಿಟ್ ಕೊಟ್ಟು, 46 ಸಾವಿರ ಕುಟುಂಬಗಳನ್ನು ಬೀದಿಗೆ ತಂದ ಪಾಪದ ಹೊಣೆ ಅವನ ಜತೆ ಕುಳಿತು ಬಿರ್ಯಾನಿ ತಿಂದವರದ್ದು. ಹಾಗೆ ಬಿರ್ಯಾನಿ ತಿಂದವರು ಯಾರು ಎಂಬುದನ್ನೂ ಕೃಷ್ಣಭೈರೇಗೌಡರು ಹೇಳಿಬಿಡಲಿ. ಬಿರಿಯಾನಿ ತಿಂದವರು ಉತ್ತರ ಕೊಡಬೇಕು ಎಂದು ಬಿಜೆಪ ಸದಸ್ಯ ಸಿ. ಟಿ. ರವಿ ಮಧ್ಯ ಕಾಲೆಳೆದರು.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಸ್ವಯಂ ಪ್ರೇರಿತವಾಗಿ ಮಾತನಾಡಲು ಎದ್ದು ನಿಂತರು. ಸಿ. ಟಿ. ರವಿ ಬಿರಿಯಾನಿ ತಿಂದವರು ಎಂದು ಪರೋಕ್ಷವಾಗಿ ನನ್ನನ್ನೇ ಉಲ್ಲೇಖಿಸಿದ್ದು ಎಂದು ಮಾತು ಆರಂಭಿಸಿದರು. ಶಾಸಕರೊಬ್ಬರು ಬಂದು ರಂಜಾನ್ ಹಬ್ಬದ ಇಫ್ತಾರ್ ಕೂಟಕ್ಕೆ ಕರೆದೊಯ್ದರು. ನಾನು ಮೊದಲ ಬಾರಿಗೆ ಅಲ್ಲಿಗೆ ಹೋಗಿದ್ದೆ. ಅವರನ್ನು ಮೊದಲ ಸಲ ನಾನು ನೋದಿದ್ದು.
ಅಧ್ಯಕ್ಷರೇ ನಾನು ಬಿರಿಯಾನಿ ತಿಂದಿಲ್ಲ. 2ನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆದ ಬಳಿಕ ಮಾಂಸಾಹಾರ ಸೇವೆನೆ ಬಿಟ್ಟಿದ್ದೇನೆ. ಅಂದು ಅಲ್ಲಿ ಖರ್ಜೂರವೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಆದರೆ ಈ ಬಗ್ಗೆ ವಾಟ್ಸಾಪ್ನಲ್ಲಿ ಫೋಟೋ ಹರಿದಾಡುತ್ತಿದೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಬಳಿಕ ನಾನೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಮ್ಮ ಅಧಿಕಾರಿಗಳು ಅವರನ್ನು ಯಶಸ್ವಿಯಾಗಿ ಬಂಧಿಸಿ, ಕರೆತಂದಿದ್ದಾರೆ. ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿ. ಯಾರು ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವುದು ಬೇರೆ ವಿಚಾರ. ಆದರೆ ಇಲ್ಲಿ ಬಿರಿಯಾನಿ ಕಥೆ ನಡೆದಿಲ್ಲ. ಬಡವರ ಹಣ ಹೊಡೆಯುವವರಿಗೆ ರಕ್ಷಣೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದರು.