ಸಾರ್ವಜನಿಕರ ವೀಕ್ಷಣೆ ಬಳಿಕ ಸಂಜೆ ಸುಷ್ಮಾ ಸ್ಮರಾಜ್ ಅಂತ್ಯಕ್ರಿಯೆ! | Janata news
ನವದೆಹಲಿ : ಬಿಜೆಪಿ ಪ್ರಮುಖ ನಾಯಕಿ, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
2016ರಲ್ಲಿ ಮೂತ್ರಪಿಂಡ ಬದಲಾವಣೆ ಮಾಡಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರು ನಂತರದ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎದುರಿಸಿದರು. ಇದೇ ಕಾರಣಕ್ಕೆ ಅವರು 2019ರ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದರು.
ಮಂಗಳವಾರ ಸುಷ್ಮಾ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ರಾತ್ರಿ 10.30ಕ್ಕೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದಂತೆ ತುರ್ತುನಿಗಾ ಘಟಕದಲ್ಲಿ ಇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಸುಷ್ಮಾ ಸ್ವರಾಜ್ ಪಾರ್ಥೀವ ಶರೀರ ಅವರ ನಿವಾಸದಲ್ಲಿದ್ದು ಗಣ್ಯ ವ್ಯಕ್ತಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಬಿಜೆಪಿ ಕಚೇರಿಗೆ ತರಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. 3 ಗಂಟೆಯ ಬಳಿಕ ಮೆರವಣಿಗೆ ಮೂಲಕ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸುಷ್ಮಾ ಸ್ವರಾಜ್ ಕುಟುಂಬ ಮೂಲಗಳು ಹೇಳಿವೆ.
ಅತೀ ಚಿಕ್ಕ ವಯಸ್ಸಿನಲ್ಲೇ ಹರಿಯಾಣ ರಾಜ್ಯದಲ್ಲಿ ಸಂಪುಟ ದರ್ಜೆ ಸಚಿವೆ ಆಗಿ ಉತ್ತಮ ಕಾರ್ಯ ನಿರ್ವಹಿಸಸಿದ್ದ ಸುಷ್ಮಾ ಸ್ವರಾಜ್, ನಂತರ ದೆಹಲಿಯ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದರು. ತಮ್ಮ ರಾಜಕೀಯ ಜೀವನದಲ್ಲಿ ಮೂರು ಬಾರಿ ಶಾಸಕಿ ಹಾಗೂ ಏಳು ಬಾರಿ ಸಂಸದೆಯಾಗಿದ್ದರು. ಈ ದೇಶದ ಎರಡನೇ ಮಹಿಳಾ ವಿದೇಶಾಂಗ ಸಚಿವೆಯಾಗಿ ಇವರ ಕಾರ್ಯ ನಿರ್ವಹಣೆ ಸಾಮಾನ್ಯ ಜನರ ಪ್ರಶಂಸೆಗೂ ಪಾತ್ರವಾಗಿತ್ತು. ಒಬ್ಬ ಧೈರ್ಯವಂತೆ ಹಾಗೂ ಮಾತೃ ಹೃದಯಿ ಹೆಣ್ಣು ಎಂಬ ಗೌರವ ಸಂಪಾದಿಸಿದರು ಸುಷ್ಮಾ ಸ್ವರಾಜ್.
ಕರ್ನಾಟಕಕ್ಕೂ ಸುಷ್ಮಾ ಸ್ವರಾಜ್ ಗೂ ಅವಿನಾಭಾವ ನಂಟು. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾಗಾಂಧಿ ವಿರುದ್ದ ಸ್ಪರ್ಧಿಸಿದ್ದರು. ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಜನಮನ ಗೆದ್ದಿದ್ದರು. ಪ್ರತಿ ವರ್ಷ ವರಮಹಾಲಕ್ಷ್ಮೀಹಬ್ಬದ ಸಂದರ್ಭದಲ್ಲಿ ಬಳ್ಳಾರಿಗೆ ಭೇಟಿ ನೀಡುತ್ತಿದ್ದರು. 2014ರಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ವಿದೇಶಾಂಗ ಸಚಿವೆ ಸ್ಥಾನ ಅಲಂಕರಿಸಿದ ಸುಷ್ಮಾ ಸ್ವರಾಜ್ ಅವರ ಕಾರ್ಯ ಶ್ಲಾಘನೀಯ. ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಭಾರತೀಯರು ಸಮಸ್ಯೆಗೆ ಸಿಲುಕಿದ್ದಾರೆ ಎಂಬ ವಿಷಯ ತಿಳಿದರೂ ಅವರ ರಕ್ಷಣೆಗೆ ಮುತುವರ್ಜಿ ವಹಿಸಿದ ಉದಾಹರಣೆಗಳು ಸಾಕಷ್ಟಿವೆ.