ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ : ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ | Janata news
ಬೆಂಗಳೂರು : ರಾಜ್ಯದ ನೂತನ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ.ಸಿ.ಏನ್ ರವರು ತಮಗಿದ್ದ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಬಳಸಲು ನಿರಾಕರಿಸಿದ್ದಾರೆ. ಈ ಕುರಿತು ಹೇಳಿರುವ ಉಪಮುಖ್ಯಮಂತ್ರಿಯವರು, ಝೀರೋ ಟ್ರಾಫಿಕ್ (Zero Traffic) ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಆಗುವುದರಿಂದ ನನಗೆ ಆ ಸೌಲಭ್ಯ ಬೇಡ. ಜನಪ್ರತಿನಿಧಿಗಳು ಜನರ ನಡುವೆಯೇ ಇದ್ದು, ಅವರ ಅನುಕೂಲ-ಅವಶ್ಯಕತೆಗಳನ್ನು ಅರಿತು ಸ್ಪಂದಿಸಬೇಕು ಎಂಬುದು ನನ್ನ ನಿಲುವು, ಎಂದು ಟ್ವೀಟ್ ಮಾಡುವ ಮೂಲಕ ಸಾರ್ವಜನಿಕವಾಗಿ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಬಗ್ಗೆ ಸಾಕಷ್ಟು ಒಲವು ತೋರಿಸಿ, ಈ ಝೀರೋ ಟ್ರಾಫಿಕ್ ವ್ಯವಸ್ಥೆಗೆ ತಮ್ಮನ್ನು ಒಳಪಡಿಸಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಸಾಮಾನ್ಯವಾಗಿ ದಿನನಿತ್ಯ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಪ್ರಸ್ತುತ ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವತ್ ನಾರಾಯಣ ಅವರ ನಿಲುವು ಬೆಂಗಳೂರಿಗರಿಗೆ ತಕ್ಕ ಮಟ್ಟಿಗೆ ಖುಷಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಬಿಜೆಪಿ ಸರ್ಕಾರ ಕೂಡ ಹಿಂದಿನಿಂದಲೂ ವಿವಿಐಪಿ ಸಂಪ್ರದಾಯದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಲೇ ಇತ್ತು. ಅನೇಕ ಸಂಧರ್ಭಗಳಲ್ಲಿ ಪ್ರಧಾನಿ ಮೋದಿ ಝೀರೋ ಟ್ರಾಫಿಕ್ ಬಳಸದೇ ಸಾಮಾನ್ಯರಂತೆ ಟ್ರಾಫಿಕ್ ನಲ್ಲಿ ಸಂಚರಿಸಿದ್ದರು.
ಸದ್ಯದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮೂವರು ಉಪಮುಖ್ಯಮಂತ್ರಿಗಳಿರುವುದರಿಂದ, ಮುಖ್ಯಮಂತ್ರಿಗಳೂ ಸೇರಿ ನಾಲ್ಕು ವಿವಿಐಪಿಗಳಿಗೆ ಝೀರೋ ಟ್ರಾಫಿಕ್ ನೀಡಿದ್ದಲ್ಲಿ, ಟ್ರಾಫಿಕ್ ಸಮಸ್ಯೆ ಉದ್ಭವಿಸುವ ಸಾದ್ಯತೆಗಳಿದ್ದವು.