ನನಗಿನ್ನೂ ವಯಸ್ಸಾಗಿಲ್ಲ, ಹಾಸನ ನಂ.1 ಮಾಡೇ ಮಾಡ್ತೀನಿ: ಎಚ್ಡಿ ರೇವಣ್ಣ | Janata news
ಹಾಸನ : ನನಗೇನು ವಯಸ್ಸಾಗಿಲ್ಲ, ಇವತ್ತಲ್ಲ, ನಾಳೆ ಹಾಸನ ಜಿಲ್ಲೆಯನ್ನು ನಂ.1 ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್ಡಿ ರೇವಣ್ಣ ಶಪಥ ಮಾಡಿದರು.
ಜಿಲ್ಲೆಗೆ ಮಾಡಿರುವ ಕೆಲಸದ ಬಗ್ಗೆ ಹೇಳಲು ಬೆಟ್ಟದಷ್ಟಿದೆ. ಕೆಲವರು ರಾಜಕೀಯ ದುರುದ್ದೇಶದಿಂದ ನಾನು ಹಾಸನಕ್ಕೆ ಮಾತ್ರ ಸೀಮಿತವಾಗಿದ್ದೇನೆ ಎಂದು ಅಪಪ್ರಚಾರ ಮಾಡುತ್ತಾರೆ. ಇನ್ನೂ ರಾಜಕೀಯ ಮಾಡೋ ಶಕ್ತಿ ಇರುವ ಕಾರಣ ಐದು ಜಿಲ್ಲೆಯ ಜವಾಬ್ದಾರಿಯನ್ನು ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಲಗೈಯಾಗಿ ನಿಲ್ಲುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೇರೆ, ನಾನು ಬೇರೆಯಲ್ಲ, ಸರಕಾರ ಉರುಳಲು ನಾನೇ ಕಾರಣ ಎಂಬ ಆರೋಪದ ಬಗ್ಗೆ ಅದೇನು ಎಂಬುದನ್ನು ಆಮೇಲೆ ಹೇಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾದ್ಯಂತ ಮಳೆ, ಪ್ರವಾಹದಿಂದ ಬೆಳೆ ಸೇರಿದಂತೆ .594 ಕೋಟಿ ಅಷ್ಟುಆಸ್ತಿಪಾಸ್ತಿ ನಷ್ಟವಾಗಿದೆ. ಆದರೆ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಪ್ರಕಾರ 9 ಕೋಟಿ ಮಾತ್ರ ಸಿಗುತ್ತದೆ. ಆದ್ದರಿಂದ ಕೂಡಲೇ NDRF ನಿಯಮ ಸಡಿಲಗೊಳಿಸಲು ರಾಜ್ಯ ಸರ್ಕಾರ, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದರು.