ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಚಾಟಿ ಬೀಸಿದ ಭಾರತ: ಕಾಶ್ಮೀರ ಭಾರತದ ರಾಜ್ಯ ಎಂದ ಪಾಕ್ ವಿದೇಶಾಂಗ ಸಚಿವ | Janata news
ಜಿನೀವಾ : ಭಾರತ ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ಮಾತಿನ ಚಾಟಿ ಬೀಸಿದೆ. ಇಂದು ಜಿನೀವಾದಲ್ಲಿ ವಿಶ್ವಸಂಸ್ಥೆ ಎಚ್ಆರ್ಸಿ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ(ಪೂರ್ವ) ವಿಜಯ ಥಾಕೂರ್ ಸಿಂಗ್ ಮಾತನಾಡಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.
ತಮ್ಮ ಸಂಕ್ಷಿಪ್ತವಾದ ಮಾತಿನಲ್ಲಿ ವಿಜಯ ಅವರು, ನಾವೆಲ್ಲರೂ ಭಯೋತ್ಪಾದನೆಯ ವಿರುದ್ಧ ಮಾತನಾಡಬೇಕು. ಮೌನವು ಅವರನ್ನು ಧೈರ್ಯಗೊಳಿಸುತ್ತದೆ. ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ದೇಶವು ವ್ಯಾಖ್ಯಾನವನ್ನು ನೀಡುತ್ತಿದೆ. ಗಡಿಯಾಚೆಗಿನ ಭಯೋತ್ಪಾದನೆ ಅವರಿಗೆ ವಿದೇಶಾಂಗ ನೀತಿಯ ಮತ್ತೊಂದು ರೂಪವಾಗಿದೆ, ಎನ್ನುವ ಮೂಲಕ ಪಾಕಿಸ್ಥಾನದ ವಿರುದ್ಧ ಗುಡುಗಿದ್ದಾರೆ.
ಅಲ್ಲದೇ, ಭಾರತ ಸರ್ಕಾರವನ್ನು ಸಮರ್ಥಿಸಿದ ಅವರು, ನನ್ನ ಸರ್ಕಾರ ಸಾಮಾಜಿಕ, ಆರ್ಥಿಕ ಸಮಾನತೆ ಮತ್ತು ನ್ಯಾಯವನ್ನು ಉತ್ತೇಜಿಸಲು ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ದೃಡವಾದ ಕ್ರಮ ತೆಗೆದುಕೊಳ್ಳುತ್ತಿದೆ, ಎಂದು ತಿಳಿಸಿದ್ದಾರೆ.
ಇದಕ್ಕೂ ಮುಂಚೆ ಇಂದು ಮಂಗಳವಾರ ಮಾದ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ತಮ್ಮ ಮಾತಿನಲ್ಲಿ, ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ರಾಜ್ಯ ಎಂದು ಉಲ್ಲೇಖಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಸತ್ಯವನ್ನು ವಿಭಜನೆಯ ನಂತರ ಇಲ್ಲಿಯವರೆಗೆ ಪಾಕಿಸ್ತಾನ ತೀವ್ರವಾಗಿ ನಿರಾಕರಿಸುತ್ತ ಬಂದಿತ್ತು.