ಉಡುಪಿಯಲ್ಲಿ ಗುಡುಗು ಸಹಿತ ಭಾರೀ ಮಳೆ, ಕೊಚ್ಚಿ ಹೋದ ರಸ್ತೆ! | Janata news
ಉಡುಪಿ : ದಿಢೀರ್ ಆಗಿ ಸುರಿದ ಭಾರಿ ಮಳೆಗೆ ರಸ್ತೆಯೇ ಕೊಚ್ಚಿ ಹೋದ ಘಟನೆ ಉಡುಪಿಯಲ್ಲಿ ನಡೆದಿದೆ. ಪರಿಣಾಮ ವಾಹನ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಹರಿಖಂಡಿಗೆ-ಪೆರ್ಡೂರು ಸಂಪರ್ಕಿಸುವ ರಸ್ತೆಯ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ.
ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆಯ ಅಕ್ಕಪಕ್ಕದಲ್ಲಿದ್ದ ಸುಮಾರು 25 ಎಕರೆ ಭತ್ತದ ಗದ್ದೆ ಜಲಾವೃತವಾಗಿತ್ತು. ರಸ್ತೆ ಅಕ್ಕ-ಪಕ್ಕ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೇ ದಿಢೀರ್ ಪ್ರವಾಹ ಕಾಣಿಸಿಕೊಂಡಿತು.
ಬೈರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಪದಕಟ್ಟೆ ಎಂಬಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯನ್ನು ಕಳೆದ ವರ್ಷ ಅಭಿವೃದ್ಧಿಗೊಳಿಸಿತ್ತು. ಇದರಿಂದ ಈ ಮಾರ್ಗದಲ್ಲಿ ರಸ್ತೆ ಸಂಚಾರ ಸ್ಥಗಿತವಾಗಿದ್ದು, ಸ್ಥಳೀಯರು ಬದಲಿ ರಸ್ತೆ ಮೊರೆಹೋಗುವ ಪರಿಸ್ಥಿತಿ ಎದುರಾಗಿದೆ. ಈಗ ಹರಿಖಂಡಿಗೆ, ದೊಂಡರಂಗಡಿ, ಅಜೆಕಾರು ಗ್ರಾಮದವರು ಪೆರ್ಡೂರಿಗೆ ಹೋಗಲು ಸುಮಾರು 5 ಕಿ. ಮೀ. ಸುತ್ತು ಹಾಕಿ ತೆರಳಬೇಕಿದೆ.