ವಿಶ್ವನಾಥ್ ಆರೋಪಕ್ಕೆ ಬೇಸತ್ತು ಸೆ.18ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ: ಸಾ.ರಾ.ಮಹೇಶ್ | Janata news
ಮೈಸೂರು : ಅನರ್ಹ ಶಾಸಕ ಹೆಚ್.ವಿಶ್ವನಾಥ್ ನನ್ನ ಮೇಲೆ ಮಾಡಿದ ಕೀಳು ಮಟ್ಟದ ಆರೋಪದಿಂದ ಬೇಸರವಾಗಿ ಸೆ. 18 ರಂದು ಶಾಸಕ ಸ್ಥಾನಕ್ಕೆ ಸೆಪ್ಟೆಂಬರ್ 18 ರಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಆಗ ಸ್ಪೀಕರ್ ಹೊರ ದೇಶದಲ್ಲಿದ್ದರು. ಸ್ಪೀಕರ್ ವಿದೇಶದಿಂದ ಬಂದ ನಂತರ ನನ್ನನ್ನು ಸ್ಪೀಕರ್ ಮನವೊಲಿಸಿ ಕಳುಹಿಸಿದ್ದರು. ಇನ್ನೂ ನನ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲಿಯೇ ಇದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಸಾ.ರಾ.ಮಹೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡರು ವಿಶ್ವನಾಥ್ ಒಳ್ಳೆಯವರಲ್ಲ, ಅವರನ್ನು ನಂಬಬೇಡ ಎಂದು ಹೇಳಿದ್ದರೂ, ನಾನು ಅವರನ್ನು ಪಕ್ಷಕ್ಕೆ ಕರೆತಂದೆ, ಅದಕ್ಕೆ ಅವರು ಹೀಗೆ ಪ್ರತಿಫಲ ನೀಡಿದರು. ಹೆಚ್.ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು, ಎಸ್.ಎಂ.ಕೃಷ್ಣ ವಿರುದ್ಧ ಪುಸ್ತಕ ಬರೆದಿದ್ದರು. ಕೊನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮುಂದೆ ಕೈ ಮುಗಿದು ನನ್ನನ್ನು ಒಂದು ಬಾರಿ ಶಾಸಕರಾಗಿ ಮಾಡಿಬಿಡಿ ಎಮದು ಕೇಳಿದ್ದರು ಎಂದು ಹೆಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದ್ದಾರೆ.
ನಾಳೆ ಬೆಳಗ್ಗೆ 9 ಗಂಟೆಗೆ ನಾನು ಚಾಮುಂಡಿಬೆಟ್ಟದಲ್ಲಿ ಇರುತ್ತೇನೆ. ಅವರು ಬರಲಿ ಆಣೆ ಮಾಡಲಿ. ನನ್ನಿಂದ ಅವರ ಕುಟುಂಬಸ್ಥರು ಹಣ ಪಡೆದಿಲ್ಲ ಎನ್ನುವುದನ್ನು ಅವರು ದೇವರ ಮುಂದೆ ಹೇಳಲಿ. ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ ಅಂತ ಪ್ರಮಾಣ ಮಾಡಲಿ. ಅಲ್ಲಿಯೇ ನಾನು ನಾಡಿನ ಜನರ ಮುಂದೆ ಬೇಷರತ್ ಕ್ಷಮೆ ಕೇಳುತ್ತೇನೆ ಎಂದು ಸಾ.ರಾ. ಮಹೇಶ್ ಸವಾಲು ಹಾಕಿದರು.
ನಂತರ ಮಾತನಾಡಿದ ಅವರು, ಹುಣಸೂರಿಗೆ ಹೊಸ ಡಿವೈಎಸ್ಪಿ ಹಾಕಿಸಿ ಕೊಂಡಿದ್ದೀರಿ. ಅದಕ್ಕೆ ಎಷ್ಟು ಹಣ ತೆಗೆದು ಕೊಂಡಿದ್ದೀರಿ.? ಕುಮಾರಣ್ಣನ ಮುಂದೆ ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದೀರಿ.? ಎಲ್ಲವನ್ನೂ ನಾನು ನಂತರ ಅಲ್ಲೆ ಹೇಳ್ತಿನಿ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ವಿರುದ್ಧ ಸಾ .ರಾ ಮಹೇಶ್ ಗುಡುಗಿದರು.